ನವದೆಹಲಿ: ದೇಶದಲ್ಲಿ 18ನೇ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರಾಜಕೀಯ ಪಕ್ಷಗಳ ನಾಯಕರು ಬಿರುಸಿನ ಮತಬೇಟೆಯಲ್ಲಿ ನಿರತರಾಗಿದ್ದಾರೆ. ಇನ್ನೂ ಈ ನಡುವೆ ಪಾಕಿಸ್ತಾನದ ರಾಜಕೀಯ ನಾಯಕರು ಭಾರತದ ಕುರಿತು ನೀಡುತ್ತಿರುವ ಹೇಳಿಕೆಗಳು ವಿಶ್ವದೆಲ್ಲೆಡೆ ಚರ್ಚೆಯಾಗುತ್ತಿದ್ದು, ಪಾಕಿಸ್ತಾನದ ಮಾಜಿ ಸಚಿವರೊಬ್ಬರು ರಾಹುಲ್ ಗಾಂಧಿ ಭಾಷಣವನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವುದು ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಈ ಕುರಿತು ಗುಜರಾತ್ನ ಆನಂದ್ನಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ ಕಾಂಗ್ರೆಸ್ ಸಾಯುತ್ತಿದ್ದರೆ ಅತ್ತ ಪಾಕಿಸ್ತಾನ ಅಳುತ್ತಿದೆ. ಇದನ್ನು ನೋಡಿದರೆ ಕಾಂಗ್ರೆಸ್ಗೆ ಪಾಕಿಸ್ತಾನದ ಜೊತೆಗೆ ಸಹಭಾಗಿತ್ವ ಇರುವುದು ಸ್ಪಷ್ಟವಾಗಿ ಕಾಣುತ್ತಿದೆ. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ದೇಶದಲ್ಲಿ ಎರಡು ಸಂವಿಧಾನಗಳಿದ್ದವು, ಎರಡು ಧ್ವಜಗಳಿದ್ದವು, ಈ ಸಂವಿಧಾನವನ್ನು ಹೊತ್ತು ಕುಣಿದ ಪ್ರಭುಗಳ ಕುಟುಂಬ ದೇಶದಲ್ಲಿ ಸಂವಿಧಾನ ಜಾರಿಯಾಗಲು ಬಿಡಲಿಲ್ಲ.
ಕಾಕತಾಳೀಯವೆಂಬಂತೆ ಇಂದು ಭಾರತದಲ್ಲಿ ಕಾಂಗ್ರೆಸ್ ದುರ್ಬಲವಾಗುತ್ತಿದೆ. ತಮಾಷೆ ಎಂದರೆ ಇಲ್ಲಿ ಕಾಂಗ್ರೆಸ್ ಸಾಯುತ್ತಿದೆ ಮತ್ತು ಅಲ್ಲಿ ಪಾಕಿಸ್ತಾನ ಅಳುತ್ತಿದೆ. ಈಗ ಪಾಕಿಸ್ತಾನದ ನಾಯಕರು ಕಾಂಗ್ರೆಸ್ಗಾಗಿ ಪ್ರಾರ್ಥಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ನಮ್ಮ ದೇಶದಲ್ಲಿದ್ದ ವರ್ಷಗಳಲ್ಲಿ ದೊಡ್ಡ ರೌಡಿಯಂತೆ ವರ್ತಿಸಿತ್ತು, ಆದರೆ ಈಗ ಭಯೋತ್ಪಾದನೆಯ ಟೈರ್ ಪಂಕ್ಚರ್ ಆಗಿದೆ. ಒಂದು ಕಾಲದಲ್ಲಿ ಭಯೋತ್ಪಾದಕರನ್ನು ರಫ್ತು ಮಾಡುತ್ತಿದ್ದ ದೇಶ ಈಗ ಹಿಟ್ಟು ಆಮದು ಮಾಡಿಕೊಳ್ಳುತ್ತಿದೆ, ಕೈಯಲ್ಲಿ ಬಾಂಬ್ ಹಿಡಿದಿದ್ದವರು ಇಂದು ಭಿಕ್ಷಾ ಪಾತ್ರೆ ಹಿಡಿದಿದ್ದಾರೆ ಎಂದು ಪ್ರಧಾನಿ ಮೋದಿ ಲೇವಡಿಯಾಡಿದ್ದಾರೆ.
ಇದನ್ನೂ ಓದಿ: ಟಿ-20 ವಿಶ್ವಕಪ್ನಲ್ಲಿ ಈ ನಾಲ್ಕು ತಂಡಗಳು ಸೆಮಿಫೈನಲ್ಗೇರುವುದು ಖಚಿತ: ಯುವರಾಜ್ ಸಿಂಗ್
ಇತ್ತ ಪಾಕ್ ನಾಯಕನ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಅಮಿತ್ ಮಾಳವಿಯಾ, ಇಮ್ರಾನ್ ಖಾನ್ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ ಫವಾದ್ ಹುಸೇನ್ ಎಂಬಾತ ರಾಹುಲ್ ಗಾಂಧಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಇದನ್ನೂ ನೋಡಿದರೆ ಕಾಂಗ್ರೆಸ್ ಪಾಕಿಸ್ತಾನದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದೆಯೇ ಎಂದು ಭಾಸವಾಗುತ್ತಿದೆ. ಏಕೆಂದರೆ ಕಾಂಗ್ರೆಸ್ನ ಪ್ರಣಾಳಿಕೆ ನೋಡಿದ ಬಳಿಕ ಮುಸ್ಲಿಂ ಲೀಗ್ನ ಚಹರೆ ಹಾಗೂ ಗಡಿಯಾಚೆ ಪಾಕಿಸ್ತಾನದೊಂದಿಗೆ ಸಂಬಂಧ ಇರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಪಾಕ್ ಮಾಜಿ ಸಚಿವನ ಪೋಸ್ಟ್ನಲ್ಲಿ ಏನಿದೆ?
ಪಾಕಿಸ್ತಾನದ ಮಾಜಿ ಸಚಿವ ಫವಾದ್ ಹುಸೇನ್ ಹಂಚಿಕೊಂಡಿರುವ ವಿಡಿಯೋವನ್ನು ನೋಡುವುದಾದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಂದಿನಂತೆ ಕಾರ್ಯಕ್ರಮ ಒಂದರಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿಯನ್ನು ನಡೆಸುತ್ತಿರುತ್ತಾರೆ. ಇದನ್ನು ಹಂಚಿಕೊಂಡಿರುವ ಫವಾದ್ ರಾಹುಲ್ ಆನ್ ಫೈರ್ ಎಂದು ಬರೆದುಕೊಂಡಿದ್ದಾರೆ. ಇತ್ತ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅನೇಕರು ಕಿಡಿಕಾರಿದ್ದು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಿಗೆ ಇದು ಮುಳುವಾಗಲಿದೆಯಾ ಎಂದು ಕಾದು ನೋಡಬೇಕಿದೆ.