ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸ್ಥಾಪಿಸಲಾಗಿರುವ ಉತ್ತರ ಕರ್ನಾಟಕದ ಪ್ರಥಮ ರೈಲ್ವೆ ವಸ್ತು ಸಂಗ್ರಹಾಲಯವನ್ನು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಭಾನುವಾರ ದೇಶಕ್ಕೆ ಸಮರ್ಪಿಸಿದರು.
ನೈಋತ್ಯ ರೈಲ್ವೆ ವಲಯದ ವತಿಯಿಂದ ವರ್ಚುವಲ್ ವೇದಿಕೆಯ ಮೂಲಕ ಭಾನುವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ಸಚಿವ ಜೋಶಿ, ಹುಬ್ಬಳ್ಳಿಬೆಳಗಾವಿ-ಬೆಂಗಳೂರು ಮಧ್ಯೆ ಇಲೆಕ್ಟ್ರಿಕ್ ರೈಲು ಸಂಪರ್ಕ ಕಲ್ಪಿಸಬೇಕು. ಇದರಿಂದ ಪ್ರಯಾಣದ ಅವಧಿಯು 8ರಿಂದ 6 ತಾಸುಗಳಿಗೆ ಇಳಿಕೆಯಾಗಲಿದೆ ಎಂದು ರೈಲ್ವೆ ಸಚಿವರಿಗೆ ಮನವಿ ಮಾಡಿದರು.
ರೈಲ್ವೆ ಸಚಿವ ಪೀಯುಷ್ ಗೋಯಲ್, ಹುಬ್ಬಳ್ಳಿ ಮ್ಯೂಸಿಯಂ ಅತ್ಯಾಕರ್ಷಕ ಪ್ರವಾಸಿ ತಾಣವಾಗಲಿದೆ. ಕೋವಿಡ್ ಬಳಿಕ ಹುಬ್ಬಳ್ಳಿ ಮ್ಯೂಸಿಯಂಗೆ ಭೇಟಿ ನೀಡಿ, ವೀಕ್ಷಿಸುವುದಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿದರು.
ಭಾನುವಾರ ಸಂಜೆ ರೈಲ್ವೆ ವಸ್ತು ಸಂಗ್ರಹಾಲಯಕ್ಕೆ ಸಚಿವರಾದ ಪ್ರಲ್ಹಾದ ಜೋಶಿ ಹಾಗೂ ಜಗದೀಶ ಶೆಟ್ಟರ್ ಭೇಟಿ ನೀಡಿ ವೀಕ್ಷಿಸಿದರು. ನೈಋತ್ಯ ರೈಲ್ವೆ ವಲಯದ ಜಿಎಂ ಎ.ಕೆ. ಸಿಂಗ್, ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಾಳಖೇಡೆ ಇತರರಿದ್ದರು.
ವೈಶಿಷ್ಟ್ಯಗಳು
ಗ್ಯಾಲಕ್ಸಿ ರೋಲಿಂಗ್ ಸ್ಟಾಕ್, ಮಲಪ್ರಭಾ ಮತ್ತು ಘಟಪ್ರಭಾ ಕಾಟೇಜ್, ಥೇಟರ್ ಕೋಚ್, ಸುರುಚಿ ಕೆಫೆಟೇರಿಯಾ, ಟಾಯ್ ಟ್ರೇನ್, ಟಿಕೆಟ್ ಮುದ್ರಣ ಯಂತ್ರ, ಮಾದರಿ ರೈಲು ಸಂಚಾರ ಹಾಗೂ ಮಕ್ಕಳ ಚಟುವಟಿಕೆ ಕೊಠಡಿ ಈ ವಸ್ತು ವೈವಿಧ್ಯ ಭವನದ ಪ್ರಮುಖಾಂಶಗಳು. ಹುಬ್ಬಳ್ಳಿಯ ಗದಗ ರಸ್ತೆಯಲ್ಲಿರುವ ರೈಲ್ವೆ ಆಸ್ಪತ್ರೆಯ ಎದುರಿಗೆ ಸ್ಥಾಪಿಸಿರುವ ರೈಲ್ವೆ ಮ್ಯೂಸಿಯಂ ಉತ್ತರ ಕರ್ನಾಟಕದ ಮೊದಲ ರೈಲ್ವೆ ಮ್ಯೂಸಿಯಂ ಆಗಿದೆ. ಮೈಸೂರು ಹೊರತುಪಡಿಸಿದರೆ ನೈಋತ್ಯ ರೈಲ್ವೆ ವಲಯದ 2ನೇ ಮ್ಯೂಸಿಯಂ ಇದಾಗಿದೆ.