ಅಥಣಿ ಗ್ರಾಮೀಣ, ಬೆಳಗಾವಿ: ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂಲ ಸೌಕರ್ಯ ಇಲ್ಲದ್ದರಿಂದ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಹಾಜರಾತಿ ಕ್ಷೀಣಿಸುತ್ತಿದೆ.
ದೇಶ ಸ್ವಾತಂತ್ರ್ಯಗೊಳ್ಳುವ ಪೂರ್ವದಲ್ಲಿ ಆರಂಭವಾದ ಶಾಲೆ ಕೊಠಡಿಗಳ ಮೇಲ್ಛಾವಣಿ ಕುಸಿಯುತ್ತಿವೆ, ಶಾಲೆ ಮೈದಾನದ ತುಂಬ ಮುಳ್ಳು ಕಂಟಿಗಳು ಬೆಳೆದಿರುವ ಜತೆಗೆ ಶೌಚಗೃಹ ಕುಸಿದಿರುವ ಕಾರಣ ವಿದ್ಯಾರ್ಥಿನಿಯರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
1ನೇ ತರಗತಿಯಿಂದ 7ನೇ ತರಗತಿವರೆಗಿನ ಶಾಲೆಯಲ್ಲಿ ಈ ಹಿಂದೆ ವಿದ್ಯಾರ್ಥಿಗಳ ಸಂಖ್ಯೆ 700ರಿಂದ 800 ಇತ್ತು. ಆದರೆ, ಈಗ ಶಾಲೆಗಳಲ್ಲಿನ ಸೌಕರ್ಯ ಕೊರತೆಯಿಂದ ಅನೇಕ ಪಾಲಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುತ್ತಿದ್ದಾರೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ದಾಖಲಾತಿ ಕ್ಷೀಣಿಸುತ್ತಿದ್ದು, ಸದ್ಯ ಶಾಲೆಯಲ್ಲಿ ಕೇವಲ 295 ವಿದ್ಯಾರ್ಥಿಗಳು ಮಾತ್ರ ವ್ಯಾಸಂಗ ಮಾಡುತ್ತಿದ್ದಾರೆ.
ಅವಧಿ ಮುಗಿದ ಬಳಿಕ ಶಾಲೆಯಲ್ಲಿ ಅನೇಕರು ಗುಂಪು ಸೇರಿ ಇಸ್ಪೀಟ್ ಆಡುತ್ತಾರೆ. ಕೆಲವರು ಮದ್ಯಪಾನ ಮಾಡಿ ಎಲ್ಲೆಂದರಲ್ಲಿ ಬಾಟಲಿ ಬಿಸಾಕುತ್ತಾರೆ. ಇದರಿಂದ ವಿದ್ಯಾರ್ಥಿಗಳಿಗೆ ಮೈದಾನದಲ್ಲಿ ಆಟವಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಶಾಲೆಯ ಅಭಿವೃದ್ಧಿಗಾಗಿ ಇರುವ ಎಸ್ಡಿಎಂಸಿ ಸಹ ರಚನೆಯಾಗದಿರುವುದು ಎಲ್ಲ ಸಮಸ್ಯೆಗಳಿಗೆ ಕಾರಣ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.
ಶಾಲೆಯ ಅಭಿವೃದ್ಧಿಗೆ ಬೇಕಿರುವ ಅನುದಾನ ನೀಡದಿರುವುದರಿಂದ ಶಾಲೆ ಈ ಸ್ಥಿತಿಗೆ ತಲುಪಲು ಪ್ರಮುಖ ಕಾರಣವಾಗಿದೆ. ಜತೆಗೆ ಶಾಲೆಯ ಅನೇಕ ಶಿಕ್ಷಕರು ಪಾಠದಲ್ಲಿ ಆಸಕ್ತಿ ತೋರದ ಕಾರಣ ಪಾಲಕರು ಬೇಸತ್ತು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ದಾಖಲಿಸುತ್ತಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ.