ಕಾರವಾರ: ಪೊಲೀಸ್ ಇಲಾಖೆಯ ಬಗ್ಗೆ ಇರುವ ಅಸಡ್ಡೆಯನ್ನು ಹೋಗಲಾಡಿಸುವ ರೀತಿಯಲ್ಲಿ ಕಾರ್ಯನಿರ್ವಹಿಸಿ ಎಂದು ಜಿಲ್ಲಾ ಪ್ರಧಾನ ಮತ್ತು ಸೆಶನ್ಸ್ ನ್ಯಾಯಾಧೀಶ ಸಿ.ರಾಜಶೇಖರ ಹೇಳಿದರು.
ಪೊಲೀಸ್ ಪರೇಡ್ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಇಲ್ಲಿನ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯಲ್ಲಿ 8 ತಿಂಗಳಿಂದ ತರಬೇತಿ ಪಡೆದ 13 ನೇ ಬ್ಯಾಚ್ನ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಲಕ್ಷಾಂತರ ಜನ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುತ್ತಾರೆ ಹಾಗಾಗಿ ಸರ್ಕಾರದ ಉಪ್ಪು ತಿನ್ನುವ ಸೌಭಾಗ್ಯ ಎಲ್ಲರಿಗೂ ಸುಲಭವಾಗಿ ಸಿಗದು. ಸರ್ಕಾರಿ ಉದ್ಯೋಗ ಪಡೆದ ನೀವೇ ಧನ್ಯರು. ಆ ಉದ್ಯೋಗಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿ, ಸರ್ಕಾರದ ಋಣ ತೀರಿಸಿ. ಇಲಾಖೆಯ ಬಗ್ಗೆ ಕೆಟ್ಟದಾಗಿ ಮಾತನಾಡುವವರ ಬಾಯಿ ಮುಚ್ಚಿಸುವ ರೀತಿಯಲ್ಲಿ ಕೆಲಸ ಮಾಡಿ. ಸರ್ಕಾರಿ ನೌಕರರು ತಮ್ಮ ಹಕ್ಕುಗಳಿಗಿಂತ ಕರ್ತವ್ಯದ ಬಗ್ಗೆ ಹೆಚ್ಚು ಒತ್ತು ನೀಡಬೇಕಾಗುತ್ತದೆ.ಜನರೊಂದಿಗೆ ಸಂಯಮದಿಂದ ವರ್ತಿಸಿ ಎಂದರು.
ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲ ಎಎಸ್ಪಿ ಬದರೀನಾಥ್ ವರದಿ ವಾಚಿಸಿದರು. ಎಸ್ಪಿ ಶಿವಪ್ರಕಾಶ ದೇವರಾಜು ಸ್ವಾಗತಿಸಿದರು. ಉಪ ಪ್ರಾಂಶುಪಾಲ ದಿಲೀಪ ಎಸ್.ಪಿ. ವಂದಿಸಿದರು.
12 ಜಿಲ್ಲೆಗಳಿಗೆ ಆಯ್ಕೆ
ಉತ್ತರ ಕನ್ನಡ ಜಿಲ್ಲೆಗೆ ಆಯ್ಕೆಯಾದ 22, ಚಿತ್ರದುರ್ಗ-9, ಮಂಗಳೂರು ನಗರ ಹಾಗೂ ರೈಲ್ವೆ ಇಲಾಖೆಗೆ-ತಲಾ 10, ಧಾರವಾಡ ಹಾಗೂ ಕೆಜಿಎಫ್ಗೆ ತಲಾ-5 ,ಮೈಸೂರು-4, ಶಿವಮೊಗ್ಗ, ಕೋಲಾರಕ್ಕೆ ತಲಾ-2, ಯಾದಗಿರಿ, ತುಮಕೂರು, ಬೆಳಗಾವಿ ನಗರ ವಿಭಾಗಳಿಗೆ ಆಯ್ಕೆಯಾದ ತಲಾ ಒಬ್ಬ ಮಹಿಳಾ ಪೊಲೀಸ್ ಸಿಬ್ಬಂದಿ ಸೇರಿ ಒಟ್ಟು ರಾಜ್ಯದ 12 ಜಿಲ್ಲೆಗಳ ವಿವಿಧ ಠಾಣೆಗಳಿಗೆ ಆಯ್ಕೆಯಾದ 72 ಮಹಿಳಾ 2020 ರ ಜೂನ್ 10 ರಿಂದ ಕಾರವಾರದಲ್ಲಿ ಪೊಲೀಸ್ ತರಬೇತಿ ಪಡೆದಿದ್ದರು. ಪೊಲೀಸ್ ಕಾನ್ಸ್ಟೇಬಲ್ಗಳು ಶಿಸ್ತಿನ ನಿರ್ಗಮನ ಪಥ ಸಂಚಲನ ಗಮನ ಸೆಳೆಯಿತು.
ಇಬಿ ಪದವೀಧರೆ ಶೂಟಿಂಗ್ನಲ್ಲಿ ಫಸ್ಟ್
ಹೊರಾಂಗಣ ವಿಭಾಗದಲ್ಲಿ ಮೊದಲ ಸ್ಥಾನ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕೆಂಜಾರು ಗ್ರಾಮದ ಕಾವೇರಿ ಅಂಬರೀಶ್ ಸವೋತ್ತಮ ಸೇವಾ ಪ್ರಶಸ್ತಿ ಪಡೆದರು. ಹಾಸನ ಮೂಲದ ಬಿಇ ಪದವೀಧರೆ ಅನ್ನಪೂರ್ಣ ರಮೇಶ್ ಒಳಾಂಗಣ ವಿಭಾಗದಲ್ಲಿ ಹಾಗೂ ಗುಂಡು ಹಾರಿಸುವಲ್ಲಿ ಮೊದಲ ಸ್ಥಾನ ಪಡೆದರು.