ಹಿರೇಕೆರೂರ: ಕಾಯಕ ಶ್ರದ್ಧೆ ಇದ್ದರೆ ಸಮಗ್ರ ಅಭಿವೃದ್ಧಿ ಕಾಣಲು ಸಾಧ್ಯ ಎಂದು ದೈವಜ್ಞ ಬ್ರಾಹ್ಮಣ ಸಮಾಜದ ಜ್ಞಾನೇಶ್ವರಿ ಪೀಠದ ಸಚ್ಚಿದಾನಂದ ಜ್ಞಾನೇಶ್ವರಿ ಭಾರತಿ ಸ್ವಾಮೀಜಿ ಹೇಳಿದರು.
ಪಟ್ಟಣದ ಜನ್ನು ಪ್ಯಾಲೇಸ್ನಲ್ಲಿ ತಾಲೂಕು ದೈವಜ್ಞ ಬ್ರಾಹ್ಮಣ ಸಮಾಜದಿಂದ ಶನಿವಾರ ಆಯೋಜಿಸಿದ್ದ ದೈವಜ್ಞ ದರ್ಶನ 2020 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವಗುರು ಬಸವಣ್ಣನವರ ಕಾಯಕವೇ ಕೈಲಾಸ ವಾಣಿಯಂತೆ ಎಲ್ಲರೂ ತಮ್ಮ ಕಾಯಕವನ್ನು ಶ್ರದ್ಧೆಯಿಂದ ಭಕ್ತಿ ಪೂರ್ವಕವಾಗಿ ಮಾಡುವ ಮೂಲಕ ಜೀವನದಲ್ಲಿ ಸತ್ಯದ ಮಾರ್ಗದಲ್ಲಿ ಬದುಕನ್ನು ಸಾಗಿಸಬೇಕು. ಅಂದಾಗ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ ಎಂದರು.
ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಗಣೇಶ ವರ್ಣೆಕರ್ ಅಧ್ಯಕ್ಷತೆ ವಹಿಸಿದ್ದರು. ಇದಕ್ಕೂ ಮುನ್ನ ಶ್ರೀ ಸಚ್ಚಿದಾನಂದ ಜ್ಞಾನೇಶ್ವರಿ ಭಾರತಿ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದ ಜಾಗೃತಿ ಹಾಗೂ ಜ್ಞಾನೇಶ್ವರಿ ದೇವಿಯ ಭಾವಚಿತ್ರ ಮೆರವಣಿಗೆ ಪಟ್ಟಣದ ಜಿ.ಬಿ. ಶಂಕರಾವ್ ವೃತ್ತದಿಂದ ಪ್ರಮುಖ ಬೀದಿಗಳ ಮೂಲಕ ವೇದಿಕೆಯವರೆಗೆ ಸಂಚರಿಸಿತು.
ಪಪಂ ಸದಸ್ಯ ಮಹೇಂದ್ರ ಬಡಳ್ಳಿ, ದೈವಜ್ಞ ಬ್ರಾಹ್ಮಣ ಸಮಾಜದ ಕಾರ್ಯದರ್ಶಿ ದತ್ತಾತ್ರೇಯ ರಾಯ್ಕರ್, ಉದ್ಯಮಿ ದಯಾನಂದ ಜನ್ನು, ತುಕಾರಾಂ ರಾಯ್ಕರ್, ಮಂಜಣ್ಣ ಶೆಟ್, ಜಗದೀಶ ಮುರಡೇಶ್ವರ, ರಾಣೆಬೆನ್ನೂರು ದೈವಜ್ಞ ಸಮಾಜದ ಅಧ್ಯಕ್ಷ ವೆಂಕಟೇಶ ದೈವಜ್ಞ, ಲಿಂಗರಾಜ ಚಪ್ಪರದಹಳ್ಳಿ ಹಾಗೂ ಸಮಾಜದವರು ಇದ್ದರು. ರಾಮು ಮುರಡೇಶ್ವರ, ಕುಮಾರ ಸಾನು ನಿರ್ವಹಿಸಿದರು.
ಎಲ್ಲ ಪೀಠಾಧಿಪತಿಗಳ ಮಾರ್ಗದರ್ಶನ, ತತ್ತ್ವ ಸಿದ್ಧಾಂತಗಳು ಒಂದೇ ಆಗಿರುತ್ತವೆ. ಎಲ್ಲರೂ ಧರ್ಮದ ತಳಹದಿಯಲ್ಲಿ ಬದುಕನ್ನು ಸಾಗಿಸಬೇಕು. ತ್ಯಾಗ, ಪರೋಪಕಾರ, ಉತ್ತಮ ಸಂಸ್ಕಾರ ರೂಢಿಸಿಕೊಳ್ಳಬೇಕು. ಸಮಾಜಮುಖಿ ಕಾರ್ಯ ಮಾಡಬೇಕು.
| ಯು.ಬಿ. ಬಣಕಾರ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ