ಬೆಳಗಾವಿ: ಕರೊನಾ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಜಿಲ್ಲಾದ್ಯಂತ ಜಾರಿಯಾಗಿರುವ ವಾರಾಂತ್ಯದ ಲಾಕ್ಡೌನ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನಗರವೂ ಸೇರಿ ಇಡೀ ಜಿಲ್ಲೆ ಬಹುತೇಕ ಸ್ತಬ್ಧವಾಗಿತ್ತು. ಹಾಲು, ಔಷಧ ಅಂಗಡಿಗಳು ಎಂದಿನಂತೆ ತೆರೆದಿದ್ದವು. ರೈತರಿಗೆ ಅನುಕೂಲ ಕಲ್ಪಿಸಲು ರಸಗೊಬ್ಬರ ಅಂಗಡಿ ತೆರೆಯಲೂ ಅವಕಾಶ ನೀಡಲಾಗಿತ್ತು. ನಗರದ ಮುಖ್ಯ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿತ್ತು.
ಸದಾ ಜನದಟ್ಟಣೆಯಿಂದ ಕೂಡಿರುತ್ತಿದ್ದ ರಾಣಿ ಚನ್ನಮ್ಮ ವೃತ್ತ, ಧರ್ಮವೀರ ಸಂಭಾಜಿ ವೃತ್ತ, ಶ್ರೀಕೃಷ್ಣದೇವರಾಯ ವೃತ್ತ, ಬಸವೇಶ್ವರ ವೃತ್ತ ಮತ್ತಿತರ ಮಾರ್ಗಗಳ ರಸ್ತೆಗಳು ಜನ-ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು. ಬೆಳಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿಸಿದ್ದ ಪೊಲೀಸರು, ಅನಗತ್ಯವಾಗಿ ಸಂಚರಿಸುತ್ತಿದ್ದ 43 ವಾಹನ ಜಪ್ತಿ ಮಾಡಿದರು. ಮಾಸ್ಕ್ ಧರಿಸದೆ ಸಂಚರಿಸಿದ 247 ಬೈಕ್ ಸವಾರರಿಗೆ ದಂಡ ವಿಧಿಸಿದರು.
‘ವಾರಾಂತ್ಯದ ಲಾಕ್ಡೌನ್ಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮುಂಬರುವ ದಿನಗಳಲ್ಲೂ ಜನ ಇದೇ ರೀತಿ ಸಹಕಾರ ನೀಡಬೇಕು. ಸಾಮುದಾಯಿಕ ಆರೋಗ್ಯ ಕಾಪಾಡುವುದಕ್ಕಾಗಿ ಕರೊನಾ ಮಾರ್ಗಸೂಚಿ ಪಾಲಿಸಬೇಕು’ ಎಂದು ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಕೋರಿದರು.