ಯಳಂದೂರು: ವಿದ್ಯಾರ್ಥಿಗಳು ಜ್ಞಾನಾರ್ಜನೆ ಜತೆಗೆ ಸೇವಾ ಮನೋಭಾವ ರೂಢಿಸಿಕೊಳ್ಳಬೇಕು ಎಂದು ಸಮಾಜ ಸೇವಕ ಗಂಗವಾಡಿ ವೀರಭ ದ್ರೇಶ್ವರ ದೇವಸ್ಥಾನದ ಧರ್ಮದರ್ಶಿ ದುಗ್ಗಹಟ್ಟಿ ಪಿ.ವೀರಭದ್ರಪ್ಪ ಕಿವಿಮಾತು ಹೇಳಿದರು.
ಸಮೀಪದ ಗಂಗವಾಡಿ ಗ್ರಾಮದಲ್ಲಿ ಶ್ರೀ ಶಿವರಾತ್ರಿ ರಾಜೇಂದ್ರ ಸಭಾ ಭವನದಲ್ಲಿ ಚಂದಕವಾಡಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ಶುಕ್ರವಾರ ಆಯೋಜಿಸಿದ್ದ 2022-23ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಎನ್ಎಸ್ಎಸ್ ಶಿಬಿರಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ವೇದಿಕೆಯಾಗಿವೆ. ಶಿಬಿರಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯ ಮೂಡಿಸುತ್ತದೆ. ಇಲ್ಲಿನ ಶಿಬಿರಾರ್ಥಿಗಳು ಗ್ರಾಮದಲ್ಲಿ ಮಾಡುವ ಶ್ರಮದಾನದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು ಎಂದು ತಿಳಿಸಿದರು.
ಪ್ರಾಂಶುಪಾಲ ಎಚ್.ಎನ್. ಸ್ವಾಮಿ ಮಾತನಾಡಿ, ಎನ್ಎಸ್ಎಸ್ ಗಾಂಧೀಜಿ ಅವರ ಗ್ರಾಮೀಣ ಭಾರತದ ಕನಸನ್ನು ನನಸು ಮಾಡಲು ಇರುವ ಉತ್ತಮ ಯೋಜನೆಯಾಗಿದೆ. ಭಾರತ ಗ್ರಾಮಗಳಿಂದ ಕೂಡಿದ ವಿಶ್ವದ ದೊಡ್ಡ ರಾಷ್ಟ್ರ. ಇಲ್ಲಿನ ಜನರ ಬದುಕನ್ನು ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದರೂ ಅದನ್ನು ಸಾಕಾರಗೊಳಿಸಲು ಇಂದಿಗೂ ಸಾಧ್ಯವಾಗಿಲ್ಲ. ಗ್ರಾಮಗಳಲ್ಲಿ ಮೂಲ ಸಮಸ್ಯೆಗಳು ಇನ್ನೂ ಕಂಡು ಬರುತ್ತಿವೆ. ಕೆಲವರಿಗೆ ಸರ್ಕಾರಿ ಸೌಲಭ್ಯಗಳ ಬಗ್ಗೆ ಮಾಹಿತಿಯೇ ಇಲ್ಲ. ಗ್ರಾಮ ಸ್ವಚ್ಛತೆ ಬಗ್ಗೆ ತಿಳಿವಳಿಕೆಯೂ ಇಲ್ಲ. ಇಂತಹ ಸ್ಥಳದಲ್ಲಿ ಶಿಬಿರಾರ್ಥಿಗಳು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಎನ್. ನಂದಕುಮಾರ್, ಗ್ರಾಪಂ ಸದಸ್ಯರಾದ ಕಾಳೇಗೌಡ, ರೇವಣ್ಣ, ಎಸ್ಡಿಎಂಸಿ ಅಧ್ಯಕ್ಷ ಕುಮಾರ್, ಜಾನಪದ ಅಕಾಡೆಮಿ ಪುರಸ್ಕೃತ ವೀರಗಾಸೆ ಕಲಾವಿದ ಡಾ.ಶಿವರುದ್ರಸ್ವಾಮಿ, ರಾಮಚಂದ್ರ, ಮಹೇಶ್, ಶಿವರುದ್ರಸ್ವಾಮಿ ಸೇರಿದಂತೆ ಇತರರು ಇದ್ದರು.