ಸಾಗರ: ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆ ಉಳಿಸುವಂತೆ ಹಲವು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಆದರೂ ಸರ್ಕಾರ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ವಿಐಎಸ್ಎಲ್ ಎಂಪ್ಲಾಯಿಸ್ ಅಸೋಸಿಯೇಷನ್ ಯೂನಿಯನ್ನ ಬಿ.ಎಸ್.ದಯಾನಂದ್ ತಿಳಿಸಿದರು.
ಭದ್ರಾವತಿಯ ವಿಐಎಸ್ಎಲ್ ಉಳಿಸುವಂತೆ ಒತ್ತಾಯಿಸಿ ಶುಕ್ರವಾರ ವಿಐಎಸ್ಎಲ್ ಎಂಪ್ಲಾಯಿಸ್ ಅಸೋಸಿಯೇಷನ್ನಿಂದ ಉಪವಿಭಾಗಾ„ಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿ, 1918ರಲ್ಲಿ ಸ್ಥಾಪಿಸಲಾದ ವಿಐಎಸ್ಎಲ್ಗೆ ನೂರು ವರ್ಷದ ಇತಿಹಾಸವಿದೆ. ಸಾವಿರಾರು ಕಾರ್ಮಿಕರಿಗೆ ಉದ್ಯೋಗ ನೀಡಿ ಬದುಕು ಕೊಟ್ಟಿದೆ ಎಂದರು.
ಏಷ್ಯಾ ಖಂಡದಲ್ಲೇ ಅತ್ಯಂತ ಪ್ರಸಿದ್ಧಿ ಪಡೆದಿರುವ ಕಾರ್ಖಾನೆ ಈಗ ರಾಜ್ಯ ಆಳುವವರ ಅವಕೃಪೆಯಿಂದ ಮುಚ್ಚುತ್ತಿದೆ. ಸೈಲ್ ಆಡಳಿತ ಮಂಡಳಿ ಮತ್ತು ಕೇಂದ್ರ ಸರ್ಕಾರ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚುವ ತೀರ್ಮಾನಕ್ಕೆ ಬಂದಿದೆ. ಹಾಗಾಗಿ ಜಿಲ್ಲಾದ್ಯಂತ ಈ ಕುರಿತು ಜಾಗೃತಿ ಮೂಡಿಸಲು ಸಂಘ ತೀರ್ಮಾನಿಸಿದ್ದು ಸಾಗರದಿಂದ ಪ್ರತಿಭಟನೆ ಮತ್ತು ಜಾಗೃತಿ ಆರಂಭಿಸಿದೆ. ಕಾರ್ಖಾನೆ ಉಳಿಸಿಕೊಡುವಂತೆ ಏಳು ತಾಲೂಕಿನಲ್ಲೂ ಜನಜಾಗೃತಿ ಮೂಡಿಸಿ ಒಮ್ಮತದ ಅಭಿಪ್ರಾಯವನ್ನು ಸರ್ಕಾರದ ಮುಂದಿರಿಸಿ ಹಕ್ಕೊತ್ತಾಯ ಮಂಡಿಸಲಾಗುತ್ತದೆ. ಇದಕ್ಕೆ ಎಲ್ಲರೂ ಕೈಜೋಡಿಸುವಂತೆ ಜನರಲ್ಲಿ ಮನವಿ ಮಾಡಿದರು.
ಮಲೆನಾಡು ರೈತ ಹೋರಾಟ ವೇದಿಕೆ ಅಧ್ಯಕ್ಷ ತೀ.ನ.ಶ್ರೀನಿವಾಸ್ ಮಾತನಾಡಿ, ಕೇಂದ್ರ ಸರ್ಕಾರ ಎಂಪಿಎಂ, ಸಕ್ಕರೆ ಕಾರ್ಖಾನೆ ಮುಚ್ಚಿ, ಖಾಸಗೀಕರಣಕ್ಕೆ ಮುಂದಾಗಿದೆ. ಜಿಲ್ಲೆಯಲ್ಲಿರುವ ಎಲ್ಲ ಉದ್ಯಮಗಳನ್ನು ಮುಚ್ಚುವ ಕೆಲಸ ಮಾಡುತ್ತಿದೆ. ಕೇಂದ್ರ ಸಚಿವರು, ಸಂಸದರು, ಮುಖ್ಯಮಂತ್ರಿಗಳು ವಿಐಎಸ್ಎಲ್ ಮುಚ್ಚುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೆ ಎಲ್ಲರೂ ಕೊಟ್ಟ ಭರವಸೆ ಮರೆತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಘ ಹಮ್ಮಿಕೊಂಡಿರುವ ಈ ಜನಾಂದೋಲನಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ. ಸರ್ಕಾರ ತಕ್ಷಣ ಕಾರ್ಖಾನೆಯನ್ನು ಪುನರಾರಂಭಿಸಲು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಎಸ್.ಆರ್.ಶ್ರೀನಿವಾಸ್, ದೇವರಾಜ್ ಸಿಂಗ್, ಶೇಷಪ್ಪ ಗೌಡ, ಪಳನಿ, ಸುಂದರ್ ಸಿಂಗ್, ದಿನೇಶ್ ಶಿರವಾಳ, ಅಮೃತ್ರಾಸ್, ಜೇಮ್ಸ್, ಧರ್ಮರಾಜ್, ಟೀಟೂ, ಎಲ್.ವಿ.ಸುಭಾಷ್ ಇತರರಿದ್ದರು.