ಯಾದಗಿರಿ: ಕಳೆದ ಮೂರು ದಿನಗಳಿಂದ ಜಿಲ್ಲಾ ಪ್ರವಾಸದಲ್ಲಿದ್ದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಸೋಮವಾರ ಸಂಜೆ ನಗರದ ವಿವಿಧೆಡೆ ದಿಢೀರ್ ಭೇಟಿ ನೀಡಿ, ಜಿಲ್ಲಾಡಳಿತಕ್ಕೆ ಒಂದಿಷ್ಟು ಸಲಹೆ ಸೂಚನೆ ನೀಡಿ, ಬೆಂಗಳೂರಿಗೆ ನಿರ್ಗಮಿಸಿದರು.
ಇಲ್ಲಿನ ಹಳೇ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಸೇವೆಗಳು, ಹೆರಿಗೆ ಕೋಣೆ, ಸ್ತ್ರೀರೋಗ ತುರ್ತು ಚಿಕಿತ್ಸೆಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ಆಸ್ಪತ್ರೆಯ ಜನರಲ್ ವಾರ್ಡ್, ಲೇಬರ್ ವಾರ್ಡ್, ಶಸ್ತ್ರ ಚಿಕಿತ್ಸಾ ಕೋಣೆ, ಅಪೌಷ್ಟಿಕತೆ ಪುನಶ್ಚೇತನಾ ಕೇಂದ್ರ, ವಿಶೇಷ ನವಜಾತ ಶಿಶು ಆರೈಕೆ ಘಟಕಗಳನ್ನು ಪರಿಶೀಲಿಸಿ ವೈದ್ಯರೊಂದಿಗೆ ಸಮಾಲೋಚಿಸಿದರು. 60ಕ್ಕೂ ಹೆಚ್ಚು ಬೆಡ್ ವ್ಯವಸ್ಥೆ ಇರುವ ಈ ಆಸ್ಪತ್ರೆಗೆ ಪ್ರತಿದಿನ ಹತ್ತಾರು ಜನ ನೋಂದಣಿ ಮಾಡಿಕೊಂಡು ಸೇವೆ ಪಡೆಯುತ್ತಾರೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದರು.
ಆಸ್ಪತ್ರೆಯನ್ನು ಸ್ವಚ್ಛ ಹಾಗೂ ಸುಂದರವಾಗಿ ಕಾಪಾಡಿಕೊಳ್ಳಬೇಕು, ಶೌಚಗೃಹಗಳಲ್ಲಿ ನೀರು ಸೋರಿಕೆಯಾಗುತ್ತಿದ್ದು ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದ ಅವರು, ನಂತರ ಸರ್ಕ್ಗೂಟ್ ಹೌಸ್ ಹತ್ತಿರದ ಸರಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ತೆರಳಿ ಕುಡಿಯುವ ನೀರು, ಬಿಸಿ ನೀರಿನ ವ್ಯವಸ್ಥೆ, ಬೆಡ್ ಮತ್ತು ಪೌಷ್ಟಿಕ ಆಹಾರದ ಬಗ್ಗೆ ವೀಕ್ಷಿಸಿದರು.
ಸ್ವಚ್ಛತೆಯ ಕೊರತೆಯು ಹೆಚ್ಚಾಗಿದ್ದು ಹಲವು ಸಮಸ್ಯೆಗಳಿಂದ ವಿದ್ಯಾರ್ಥಿಗಳಿಗೆ ಕೂಡಲೇ ಮುಕ್ತಿ ನೀಡಬೇಕು. ನಿಲಯವು ಹತ್ತಾರು ಸಮಸ್ಯೆಗಳಿಂದ ಬಳಲುತ್ತಿದ್ದು, ಶೀಘ್ರದಲ್ಲೇ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ಬಂದು ಪರಿಶೀಲಿಸಿ ವರದಿ ಸಲ್ಲಿಸುವಂತೆ ತಿಳಿಸಲಾಗುವುದು. ಮೆನು ಚಾರ್ಟ್ ಪ್ರಕಾರ ಆಹಾರ ನೀಡಬೇಕು, ಸ್ವಚ್ಛವಾಗಿ ಅಡುಗೆ ಕೋಣೆ ನೋಡಿಕೊಂಡು ಹೊಗೆ ಹೊರ ಹೋಗಲು ಪುರಕವಿರುವ ಫ್ಯಾನ್ ವ್ಯವಸ್ಥೆಯ ಮಾಡಕೊಳ್ಳಬೇಕು ಎಂದು ಸೂಚನೆ ನೀಡಿದ ನ್ಯಾಯಮೂರ್ತಿಗಳು ಸಮಾಜ ಕಲ್ಯಾಣ ಅಧಿಕಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.