ಧಾರವಾಡ: ಇಲ್ಲಿನ ನವಲೂರ ಬಳಿ ಬಿಆರ್ಟಿಎಸ್ ನಿರ್ವಿುಸುತ್ತಿರುವ ಮೇಲ್ಸೇತುವೆ ಕಾಮಗಾರಿ 2 ವರ್ಷದಿಂದ ಸ್ಥಗಿತಗೊಂಡಿದೆ. ಈಗ ನಿರ್ವಿುಸಿರುವ ಮೇಲ್ಸೇತುವೆ ಗೋಡೆಯ ಪ್ಯಾನಲ್ಗಳು ಉದುರಿ ಬೀಳುತ್ತಿವೆ.
ಬಿಆರ್ಟಿಎಸ್ ಚಿಗರಿ ಬಸ್ಗಳ ಸಂಚಾರಕ್ಕೆ ಪ್ರತ್ಯೇಕ 2 ಪಥ ನಿರ್ವಿುಸಲಾಗುತ್ತಿದೆ. ಒಂದು ಬದಿಯ ಕಾಮಗಾರಿ ಮುಗಿದಿದ್ದು, ಮತ್ತೊಂದು ಬದಿಯ ಕೆಲಸ ನಿಂತಿದೆ. ಹುಬ್ಬಳ್ಳಿಯಿಂದ ಧಾರವಾಡಕ್ಕೆ ಬರಲು ಎಡಬದಿ ಗೋಡೆ ಪಕ್ಕ ಅಳವಡಿಸಿರುವ ಪ್ಯಾನಲ್ಗಳು ಬೀಳುತ್ತಿವೆ. ಒಳಗಡೆ ಹಾಕಿದ ಮಣ್ಣು, ಪ್ಯಾನಲ್ ಸರ್ವೀಸ್ ರಸ್ತೆಯಲ್ಲಿ ಬಿದ್ದಿದ್ದು, ವಾಹನ ಸವಾರರು, ಸಾರ್ವಜನಿಕರ ಸಂಚಾರಕ್ಕೆ ಸಂಚಕಾರ ಬಂದೊದಗಿದೆ.
ಈ ಕುರಿತು ಶಾಸಕ ಅರವಿಂದ ಬೆಲ್ಲದ ನಗರದಲ್ಲಿ ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ‘ನವಲೂರ ಮೇಲ್ಸೇತುವೆಯ ಡಿಸೈನ್ ಹಾಗೂ ನಿರ್ಮಾಣ ಸರಿಯಾಗಿಲ್ಲ. ಗೋಡೆ ಕುಸಿಯಬಹುದು ಎಂದು ಅಲ್ಲಿನ ಜನರು ವರ್ಷದ ಹಿಂದೆಯೇ ತಿಳಿಸಿದ್ದರು. ಈ ಸಂಬಂಧ 2-3 ಸಭೆಗಳಲ್ಲಿ ವಿಷಯ ಪ್ರಸ್ತಾಪಿಸಿ ಬಿಆರ್ಟಿಎಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದೆ. ಈಗ ಕುಸಿದಿದ್ದು, ಕಳಪೆ ಕಾಮಗಾರಿಯ ತನಿಖೆ ಆಗಬೇಕು. ಅಲ್ಲದೆ ಸಂಬಂಧಪಟ್ಟ ಇಂಜಿನಿಯರ್, ಕನ್ಸಲ್ಟಂಟ್, ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ’ ಎಂದರು.