More

    ಮಾರಿಕಾಂಬೆ ಜಾತ್ರೆಗೆ ವಿಧ್ಯುಕ್ತ ಚಾಲನೆ

    ಸಾಗರ: ಇತಿಹಾಸ ಪ್ರಸಿದ್ಧ ಮಾರಿಕಾಂಬೆ ಜಾತ್ರೆಗೆ ಧಾರ್ವಿುಕ ವಿಧಿ ವಿಧಾನದ ಆಚರಣೆಗಳ ಮೂಲಕ ಮಂಗಳವಾರ ವಿಧ್ಯುಕ್ತ ಚಾಲನೆ ದೊರೆಯಿತು. 9 ದಿನಗಳ ಜಾತ್ರೋತ್ಸವಕ್ಕೆ ಬೆಳಗ್ಗೆಯಿಂದಲೇ ಪೂಜೆ ಆರಂಭಿಸಲಾಯಿತು. ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದರು.

    ಮಂಗಳವಾರ ಬೆಳದಿನ ಜಾವ 3 ಗಂಟೆಗೆ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಮಾರಿಕಾಂಬೆಯ ತಾಳಿ ಮತ್ತು ಆಭರಣಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ಪುರೋಹಿತ ರಮೇಶ ಭಟ್ಟರ ಮನೆಯಲ್ಲಿ ಪೂಜಾ ವಿಧಿ ವಿಧಾನಗಳು ನಡೆದವು.

    ಮಂಗಳವಾದ್ಯಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ಬಂದ ದೇವಿಯ ಆಭರಣಗಳನ್ನು ತವರುಮನೆಗೆ ತರಲಾಯಿತು. ಮೆರವಣಿಗೆಯಲ್ಲಿ ಕೇರಳದ ಕಲಾತಂಡದವರು ಚಂಡೆವಾದನ ನಡೆಸಿಕೊಟ್ಟರು. ತವರುಮನೆಯಲ್ಲಿ ಪ್ರತಿಷ್ಠಾಪಿಸಿದ್ದ ನಯನ ಮನೋಹರವಾದ ಶ್ರೀ ಮಾರಿಕಾಂಬೆ ವಿಗ್ರಹಕ್ಕೆ ವಿವಿಧ ಸಾಂಪ್ರದಾಯಿಕ ಆಚರಣೆಗಳ ಮೂಲಕ ಆಭರಣ ತೊಡಿಸಲಾಯಿತು.

    ಅಮ್ಮನ ವಿಗ್ರಹಕ್ಕೆ ಭಾರಿ ಗಾತ್ರದ ಹೂವಿನ ಹಾರ ಹಾಕಲಾಗಿತ್ತು. ವೈವಿಧ್ಯಮಯ ಹೂಗಳಿಂದ ಅಲಂಕಾರ ಮಾಡಿ ಮಹಾಮಂಗಳಾರತಿ ನೆರವೇರಿಸಲಾಯಿತು. ನಂತರ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ತಾಯಿಗೆ ಹರಕೆ ಸಲ್ಲಿಸಲು ಆರಂಭದಲ್ಲಿ ನೂಕು ನುಗ್ಗಲಾಯಿತು. ಸಮಿತಿ ಸದಸ್ಯರು ಮತ್ತು ಪೊಲೀಸ್ ಸಿಬ್ಬಂದಿ ಹತೋಟಿಗೆ ತಂದರು. ಪೂಜಾ ಸಮಿತಿಯ ಶಿಸ್ತುಬದ್ಧ ನಿಯಮಗಳಿಂದ ದರ್ಶನಕ್ಕೆ ಅನುಕೂಲವಾಯಿತು.

    ನಾಳೆ ಗಂಡನ ಮನೆ ಆವರಣದಲ್ಲಿ ದರ್ಶನ: ಫೆ.19ರಿಂದ ಶ್ರೀ ಮಾರಿಕಾಂಬೆ ದೇವಿಯನ್ನು ಗಂಡನ ಮನೆ ಆವರಣದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಫೆ.26ರವರೆಗೂ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹಿರಿಯ ನಾಗರಿಕರು, ಅಂಗವಿಕಲರಿಗೆ ಅನುಕೂಲವಾಗುವಂತೆ ಸಮಿತಿ ಕ್ರಮ ಕೈಗೊಂಡಿದೆ. ಉಡಿಸೇವೆ, ತುಲಾಭಾರ ಸೇರಿ ಭಕ್ತರು ಹರಕೆ ಸಲ್ಲಿಸಲು ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. 9 ದಿನಗಳ ವೈವಿಧ್ಯ ಪೂಜಾ ವಿಧಿವಿಧಾನಗಳ ಬಳಿಕ ಫೆ.26ರ ರಾತ್ರಿ 10.30ಕ್ಕೆ ರಾಜಬೀದಿ ಉತ್ಸವ ನಡೆಯುತ್ತದೆ. ಶ್ರೀ ಮಾರಿಕಾಂಬಾ ದೇವಿಯನ್ನು ವನಕ್ಕೆ ಬಿಟ್ಟು ಬರುವ ಮೂಲಕ ಜಾತ್ರೆ ಸಂಪನ್ನಗೊಳ್ಳುತ್ತದೆ. ಜಾತ್ರೆಗೆ ಆಗಮಿಸುವ ಸಾರ್ವಜನಿಕರಿಗೆ ಜಾತ್ರಾ ಸಮಿತಿಯಿಂದ ಮಧ್ಯಾಹ್ನ ಮತ್ತು ರಾತ್ರಿ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ಸ್ಥಳೀಯ ಸಂಘ ಸಂಸ್ಥೆಗಳು ಉಚಿತವಾಗಿ ಪಾನೀಯ, ಉಪಾಹಾರ ಹಾಗೂ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿವೆ.

    ರಾತ್ರಿಯಿಂದಲೇ ಸರದಿ ಸಾಲು: ತವರುಮನೆಯಲ್ಲಿ ಶ್ರೀ ಮಾರಿಕಾಂಬೆ ದರ್ಶನಕ್ಕಾಗಿ ಸಾವಿರಾರು ಸಂಖ್ಯೆಯ ಭಕ್ತರು ಸೋಮವಾರ ರಾತ್ರಿಯಿಂದಲೇ ಸರದಿ ಸಾಲಿನಲ್ಲಿ ನಿಂತಿದ್ದರು. ಸೋಮವಾರ ರಾತ್ರಿ 11ಕ್ಕೆ ನಿಧಾನವಾಗಿ ಜನ ಸೇರಲು ಆರಂಭಿಸಿದರು. ಬೆಳಗಾಗುವ ವೇಳೆಗೆ ಸರದಿ ಸಾಲು ಸಾಗರ ಪಟ್ಟಣದ ಪ್ರಮುಖ ರಸ್ತೆಗಳನ್ನು ಆವರಿಸಿತ್ತು.

    ವ್ಯಾಪಾರ ವಹಿವಾಟು ಜೋರು: ಆರಂಭದ ದಿನವೇ ವಿವಿಧ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿತ್ತು. 9 ದಿನಗಳ ಕಾಲ ಜಾತ್ರೆ ಹಿನ್ನೆಲೆಯಲ್ಲಿ ಇನ್ನೂ ಹೆಚ್ಚಿನ ವ್ಯಾಪಾರ ವಹಿವಾಟು ನಡೆಯಲಿದೆ. ದೇವಿಯ ದರ್ಶನ ಪಡೆಯಲು ಆಗಮಿದ ಭಕ್ತರು ಮಳಿಗೆಗಳಲ್ಲಿ ಅಗತ್ಯ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದರು. ಅದರಲ್ಲೂ ಬೆಂಡುಬತ್ತಾಸು, ಮಂಡಕ್ಕಿ, ಜಿಲೇಬಿ ಸೇರಿ ವಿವಿಧ ತಿನಿಸುಗಳನ್ನು ಖರೀದಿಸುತ್ತಿದ್ದರು.

    ಮಾರಿಕಾಂಬೆ ಜಾತ್ರೆಯಲ್ಲಿಂದು: ಶ್ರೀ ಮಾರಿಕಾಂಬಾ ಕಲಾ ವೇದಿಕೆಯಲ್ಲಿ ಫೆ.19ರ ಸಂಜೆ 7ಕ್ಕೆ ಸಾಂಸ್ಕೃತಿಕ ಸಿರಿ ಉತ್ಸವಕ್ಕೆ ಶಾಸಕ ಹರತಾಳು ಹಾಲಪ್ಪ ಚಾಲನೆ ನೀಡುವರು. ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಕೆ.ಎಸ್.ಈಶ್ವರಪ್ಪ, ಕೋಟ ಶ್ರೀನಿವಾಸ ಪೂಜಾರಿ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಶಾಸಕ ಕುಮಾರ್ ಬಂಗಾರಪ್ಪ, ಎಂಎಲ್​ಸಿಗಳಾದ ಆಯನೂರು ಮಂಜುನಾಥ್, ಆರ್.ಪ್ರಸನ್ನಕುಮಾರ್, ಬೋಜೇಗೌಡ, ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಸಾಹಿತಿ ಡಾ. ನಾ.ಡಿಸೋಜ, ಡಿಸಿ ಕೆ.ಬಿ.ಶಿವಕುಮಾರ್, ಎಸ್ಪಿ ಕೆ.ಎಂ.ಶಾಂತರಾಜ್ ಭಾಗವಹಿಸುವರು. ಜಾತ್ರೆ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ ಅಧ್ಯಕ್ಷತೆ ವಹಿಸುವರು.

    ಸಾಂಸ್ಕೃತಿಕ ಕಾರ್ಯಕ್ರಮ: ಸಂಜೆ 5.30ರಿಂದ ಬೆಂಗಳೂರಿನ ಭೂಮಿಕಾ ಅವರಿಂದ ಭರತನಾಟ್ಯ, 6ರಿಂದ ವಿಶಾಲ್ ಹರಿಕಿರಣ್ ಅವರಿಂದ ಕೂಚುಪುಡಿ, 6.30ರಿಂದ ಸಾಯಿ ಗ್ರೂಪ್ ಡ್ಯಾನ್ಸ್ ಸಾಗರ ತಂಡದಿಂದ ನೃತ್ಯ, ರಾತ್ರಿ 8ರಿಂದ ಎಚ್.ಎಲ್.ರಾಘವೇಂದ್ರ ವೃಂದದಿಂದ ರಸಮಂಜರಿ, ರಾತ್ರಿ 9.30ರಿಂದ ಉಡುಪಿಯ ಡಾ. ಅಭಿಷೇಕ್ ಕರೋಡ್ಕಲ್ ಅವರಿಂದ ರಸಮಂಜರಿ ಕಾರ್ಯಕ್ರಮ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts