More

    ಪ್ರತ್ಯೇಕ ಆಸ್ಪತ್ರೆ ಗುರುತಿಸಿ ಸೌಲಭ್ಯ ಕಲ್ಪಿಸಿ

    ಹಾವೇರಿ: ಕೋವಿಡ್-19 ಸೋಂಕು ಪೀಡಿತರ ತುರ್ತು ಚಿಕಿತ್ಸೆಗಾಗಿ ಪ್ರತ್ಯೇಕ ಕೋವಿಡ್-19 ಆಸ್ಪತ್ರೆಯನ್ನು ಗುರುತಿಸಿ ಪೂರ್ಣ ಪ್ರಮಾಣದ ವೈದ್ಯಕೀಯ ಸೌಲಭ್ಯದೊಂದಿಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಸೂಚಿಸಿದರು.

    ಕರೊನಾ ವೈರಸ್ ತಡೆಗೆ ಜಿಲ್ಲಾಡಳಿತ ಕೈಗೊಂಡಿರುವ ಮುಂಜಾಗ್ರತೆ ಕ್ರಮಗಳ ಕುರಿತು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಜಿಲ್ಲಾ ಕೇಂದ್ರದಲ್ಲಿ ಕೋವಿಡ್-19 ಆಸ್ಪತ್ರೆಯನ್ನು ಸಜ್ಜುಗೊಳಿಸಿ. ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಎಲ್ಲ ವೆಂಟಿಲೇಟರ್​ಗಳನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಿ. ತಜ್ಞವೈದ್ಯರ ತಂಡ, ಅರೇವೈದ್ಯಕೀಯ ಸಿಬ್ಬಂದಿಯ ತಂಡ ರಚಿಸಿ. ಕರೊನಾ ಸೋಂಕಿತರು ಕಂಡು ಬಂದರೆ ತುರ್ತಾಗಿ ಚಿಕಿತ್ಸೆ ನೀಡಲು ಸಜ್ಜಾಗಬೇಕು. ಒಂದಕ್ಕಿಂತ ಹೆಚ್ಚು ಪ್ರಕರಣ ಕಂಡುಬಂದರೂ ಒಂದೆಡೆ ಚಿಕಿತ್ಸೆಗೆ ಸ್ಪಂದಿಸಲು ಒಂದೇ ಕಾಂಪ್ಲೆಕ್ಸ್​ನಲ್ಲಿ ಕೋವಿಡ್ ಆಸ್ಪತ್ರೆ ಪೂರ್ಣ ಪ್ರಮಾಣದ ವೈದ್ಯಕೀಯ ಸೌಕರ್ಯದೊಂದಿಗೆ ಸಿದ್ಧಗೊಳ್ಳಬೇಕು ಎಂದು ಸಲಹೆ ನೀಡಿದರು.

    ಜನರ ಸಾಮಾನ್ಯ ಚಿಕಿತ್ಸೆಗೆ ಅನುಕೂಲವಾಗುವಂತೆ ಜಿಲ್ಲಾದ್ಯಂತ ಖಾಸಗಿ ಆಸ್ಪತ್ರೆಗಳು ತೆರೆದಿರಬೇಕು. ಎಲ್ಲ ಕ್ಲಿನಿಕ್​ಗಳನ್ನು ತೆರೆಯಲು ಖಾಸಗಿ ವೈದ್ಯರಿಗೆ ನೋಟಿಸ್ ನೀಡಿ. ಒಂದೊಮ್ಮೆ ಕ್ಲಿನಿಕ್​ಗಳನ್ನು ತೆರೆಯದಿದ್ದರೆ ವಿಪತ್ತು ನಿರ್ವಹಣಾ ಕಾಯ್ದೆ ಅನುಸಾರ ಕ್ರಮಕೈಗೊಳ್ಳಿ ಎಂದರು.

    ಪಡಿತರದಾರರಿಗೆ ಯಾವುದೇ ಕಿರಿಕಿರಿ ಇಲ್ಲದೆ ಪಡಿತರ ನೀಡಬೇಕು. ರಜೆ ದಿನಗಳಾದ ಭಾನುವಾರ ಹಾಗೂ ಮಹಾವೀರ ಜಯಂತಿ ದಿನವಾದ ಸೋಮವಾರವೂ ರೇಷನ್ ಅಂಗಡಿ ತೆರೆದಿಡಬೇಕು. ಕಾರ್ವಿುಕ ಇಲಾಖೆಯಿಂದ ವಲಸೆ ಕಾರ್ವಿುಕರಿಗೆ ಪ್ರತಿ ವ್ಯಕ್ತಿಗೆ ಒಂದು ತಿಂಗಳಿಗಾಗುವಷ್ಟು ಫುಡ್ ಕಿಟ್​ಗಳನ್ನು ವಿತರಿಸಬೇಕು. ಕೊಳಚೆ ಪ್ರದೇಶದ ನಿವಾಸಿಗಳಿಗೆ, ಅಲೆಮಾರಿಗಳಿಗೆ, ವಲಸೆ ಕಾರ್ವಿುಕರಿಗೆ, ದುರ್ಬಲ ಜನರಿಗೆ ಉಚಿತವಾಗಿ ಹಾಲು ವಿತರಿಸಬೇಕು. ಈ ಸಂದರ್ಭದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಯಾರೊಬ್ಬರೂ ಹಸಿವಿನಿಂದ ಬಳಲಬಾರದು. ಅಗತ್ಯವಿರುವ ವ್ಯಕ್ತಿಗಳಿಗೆ ಊಟ ಹಾಗೂ ರೇಷನ್​ಗಳನ್ನು ನೀಡಬೇಕು ಎಂದು ಸಲಹೆ ನೀಡಿದರು.

    ಜನಧನ್ ಸೇರಿ ವಿವಿಧ ಯೋಜನೆಗಳಡಿ ಫಲಾನುಭವಿಗಳ ಖಾತೆಗೆ ನೇರ ನಗದು ಜಮಾ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಎ.ಟಿ.ಎಂ ಮುಂದೆ ಹಾಗೂ ಬ್ಯಾಂಕ್​ಗಳ ಮುಂದೆ ಜನಜಂಗುಳಿಯಾಗದಂತೆ ಅಂತರವನ್ನು ಕಾಯ್ದುಕೊಳ್ಳಬೇಕು. ಸೂಕ್ತ ನೆರಳಿನ ವ್ಯವಸ್ಥೆ ಕೈಗೊಳ್ಳಬೇಕು. ಅಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಳ್ಳದೆ ಕ್ಷೇತ್ರಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸೂಚಿಸಿದರು.

    ವೈದ್ಯರು ಮಾತ್ರ ಎನ್-95 ಮಾಸ್ಕ್ ಧರಿಸಬೇಕು. ಅಧಿಕಾರಿಗಳು, ಸಾಮಾನ್ಯ ಜನರಿಗೆ ಎನ್ 95 ಮಾಸ್ಕ್ ಅವಶ್ಯಕತೆ ಇಲ್ಲ. ಅನಗತ್ಯವಾಗಿ ಎನ್-95 ಮಾಸ್ಕ್​ಗಳನ್ನು ವೈದ್ಯಕೀಯ ಸಿಬ್ಬಂದಿ ಹೊರತುಪಡಿಸಿ ಬೇರೆಯವರಿಗೆ ನೀಡಬೇಡಿ ಎಂದರು.

    ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ. ದೇವರಾಜ, ಜಿಪಂ ಸಿಇಒ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಉಪವಿಭಾಗಾಧಿಕಾರಿಗಳಾದ ಡಾ. ದಿಲೀಷ್ ಶಶಿ, ಅನ್ನಪೂರ್ಣ ಮುದಕಮ್ಮನವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಂದ್ರ ದೊಡ್ಡಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ನಾಗರಾಜ ನಾಯಕ, ಆಹಾರ ಮತ್ತು ನಾಗಾರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ವಿನೋದಕುಮಾರ ಹೆಗ್ಗಳಗಿ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ, ವಾರ್ತಾಧಿಕಾರಿ ಬಿ.ಆರ್. ರಂಗನಾಥ್ ಇತರರು ಉಪಸ್ಥಿತರಿದ್ದರು.

    ಸಾರ್ವಜನಿಕರಿಗೆ ನಿತ್ಯದ ದಿನಸಿ, ತರಕಾರಿಗಳಿಗೆ ಯಾವುದೇ ತೊಂದರೆಯಾಗಬಾರದು. ರೈತರ ಉತ್ಪನ್ನಗಳ ಮಾರಾಟ ಹಾಗೂ ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗಬಾರದು. ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ಮುಚ್ಚಬಾರದು. ಚೆಕ್​ಪೋಸ್ಟ್​ಗಳಲ್ಲಿ ಸರಕು ಸಾಗಣೆಗೆ ತೊಂದರೆಯಾಗಬಾರದು. ಅಗತ್ಯ ವಸ್ತುಗಳ ಉತ್ಪಾದನಾ ಚಟುವಟಿಕೆಗಳನ್ನು ಆರಂಭಿಸಲು ನಿಯಮಾನುಸಾರ ಕ್ರಮ ಕೈಗೊಳ್ಳಬೇಕು.
    | ಮನೋಜ್ ಜೈನ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts