ಮುದ್ದೇಬಿಹಾಳ: ಅನಧಿಕೃತ ಭೂಮಾಪಕ ನಕ್ಷೆ ತೋರಿಸಿ ಡಾಂಬರ್ ರಸ್ತೆ ಅತಿಕ್ರಮಣ ಮಾಡಿಕೊಂಡಿದ್ದೀರಿ ಎಂದು ತಾಲೂಕಿನ ಕಾಳಗಿ ಪಿಡಿಒ ನೋಟಿಸ್ ನೀಡಿದ್ದು, ಅದನ್ನು ರದ್ದುಪಡಿಸಬೇಕೆಂದು ಕೋರಿ ತಾಲೂಕಿನ ಕಾಳಗಿ ಗ್ರಾಮದ ನಿವಾಸಿಗಳು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಗೆ ಆಗಮಿಸಿದ ಕಾಳಗಿ ಗ್ರಾಮದ ನಿವಾಸಿಗಳು, ಕಾಳಗಿ-ಹುಲ್ಲೂರ ರಸ್ತೆ ಅತಿಕ್ರಮಣ ಮಾಡಿಕೊಂಡಿದ್ದೀರಿ. ಸೆ.19ರೊಳಗೆ ತೆರವುಗೊಳಿಸಬೇಕು ಎಂದು ಪಿಡಿಒ ಸೆ.12ರಂದು ನೋಟಿಸ್ ನೀಡಿದ್ದಾರೆ. ಕಾಳಗಿ-ಹುಲ್ಲೂರ ಡಾಂಬರ್ ರಸ್ತೆ ಅತಿಕ್ರಮಿಸಿಕೊಂಡಿದ್ದೀರಿ. 176 ಸರ್ವೇ ನಂಬರಿನವರಿಗೆ ಮೂಲ ರಸ್ತೆ ಇದೆ ಎಂದು ಪಿಡಿಒ ತಿಳಿಸಿದ್ದಾರೆ. ಆದರೆ, ಪಿಡಿಒ ತಿಳಿಸಿದಂತೆ 176 ಸರ್ವೇ ನಂಬರಿನ ಜಮೀನುಗಳಿಗೆ ಮತ್ತು ಕಾಳಗಿ-ಹುಲ್ಲೂರ ರಸ್ತೆ ಮಧ್ಯೆ 30 ಮೀಟರ್ ಅಂತರವಿದೆ. 176 ಸರ್ವೇ ನಂಬರಿನಲ್ಲಿ ವಾಸಿಸುತ್ತಿರುವವರು ಕಾಳಗಿ-ಹುಲ್ಲೂರ ಡಾಂಬರ್ ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡಿರುವುದಿಲ್ಲ. 176ರ ಸರ್ವೇ ನಂಬರಿನಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ತೆರಳಲು ಯಾವುದೇ ತೊಂದರೆ ಇರುವುದಿಲ್ಲ. 1986-87ರಿಂದ ವಾಸಿಸುತ್ತಿರುವ ನಿವಾಸಿಗಳಿಗೆ ಸರ್ಕಾರ ಹಕ್ಕು ಪತ್ರ ನೀಡಿದೆ. ಈ ಜಾಗದಲ್ಲಿ ಯಾರೂ ಅನಧಿಕೃತವಾಗಿ ವಾಸ ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ.
ಸರ್ಕಾರಿ ಜಾಗದಲ್ಲಿ ಯಾವುದೇ ಮನೆಗಳನ್ನು ಕಟ್ಟಿಕೊಂಡಿಲ್ಲ. ಕಳೆದ 30 ವರ್ಷಗಳಿಂದ ನಾವು ವಾಸಿಸುತ್ತಿರುವ ಜಾಗದಿಂದ ನಮ್ಮನ್ನು ತೆರವುಗೊಳಿಸಿದರೆ 50ಕ್ಕೂ ಹೆಚ್ಚು ಕುಟುಂಬದವರು ಸಾಮೂಹಿಕ ಆತ್ಮಹತ್ಯೆಗೆ ಮುಂದಾಗುವುದಾಗಿ ತಿಳಿಸಿದ್ದಾರೆ. ಮನವಿಯನ್ನು ಶಿರಸ್ತೆದಾರ್ ವೀರೇಶ ತೊನಶ್ಯಾಳ ಅವರಿಗೆ ಸಲ್ಲಿಸಿದರು.
ಗ್ರಾಮಸ್ಥರಾದ ಹುಸೇನ್ ಮುಲ್ಲಾ, ಹುಲ್ಲಪ್ಪ ಮಾದರ, ದುಂಡಪ್ಪ ಅಂಬಿಗೇರ, ಹುಸೇನಸಾಬ್ ಬೆಣ್ಣೂರ, ಲಾಲಸಾಬ್ ದಾಡಿ, ಮುರ್ತುಜಸಾ ನಾಯ್ಕೋಡಿ, ಅಶ್ಪಾಕ್ ಮುಲ್ಲಾ, ಲಾಳೇಸಾಬ ನಾಯ್ಕೋಡಿ, ಸಂಗಪ್ಪ ಪಾಟೀಲ, ಮುದ್ದಪ್ಪ ಮನಗೂಳಿ, ಯಮನಪ್ಪ ನಾಶಿ, ರಾಜು ನದಾಫ್, ಜುಬ್ರಾಯಿಲ್ ಮುಲ್ಲಾ, ಶಾಜಾನ್ ಮುಲ್ಲಾ ಮತ್ತಿತರರು ಉಪಸ್ಥಿತರಿದ್ದರು.