ಹುಕ್ಕೇರಿ: ಹುಕ್ಕೇರಿ ಮತಕ್ಷೇತ್ರದ ಯರಗಟ್ಟಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಗೆ ಸರ್ಕಾರ ಮಂಜೂರು ಮಾಡಿದ 10 ಎಕರೆ ನಿವೇಶನದ ಪಹಣಿ ಪತ್ರಿಕೆಯನ್ನು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರು ಶಾಲಾ ಅಭಿವೃದ್ಧಿ ಸಮಿತಿಗೆ ಶನಿವಾರ ಹಸ್ತಾಂತರಿಸಿದರು.
ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಮಂಜೂರಾತಿ ಪತ್ರ ನೀಡಿ ಮಾತನಾಡಿದ ಅವರು, ನಮ್ಮಣ್ಣ ದಿ.ಉಮೇಶ ಕತ್ತಿ ಅವರು ಹುಕ್ಕೇರಿ ಮತಕ್ಷೇತ್ರದ ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲಿ ಎಂದು ಹಲವು ಪ್ರೌಢಶಾಲೆ, ಕಾಲೇಜು ಮಂಜೂರು ಮಾಡಿಸಿದ್ದರು. ಇಂಗ್ಲಿಷ್ ಕಲಿಕೆಗೆ ಸಹಕಾರಿ ಆಗಲಿ ಎಂದು ರಾಜ್ಯ ಸರ್ಕಾರ ಪ್ರಾರಂಭಿಸಿದ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಸಹ ಕ್ಷೇತ್ರದ ಆಯ್ದ ಗ್ರಾಮಗಳಲ್ಲಿ ಪ್ರಾರಂಭಿಸಿದ್ದರು. ಆ ಶಾಲೆಗಳಿಗೆ ಈಗಿರುವ ಶಾಲೆಗಳಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆ ಶಾಲೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಪ್ರತ್ಯೇಕ ನಿವೇಶನದ ಅವಶ್ಯಕತೆ ಇತ್ತು. ಅದರ ಲವಾಗಿ ಗ್ರಾಮದ ಗಾಯರಾಣ ಸರ್ವೇ ನಂ.77ರಲ್ಲಿ ಈ ಶಾಲೆಗೆ 10 ಎಕರೆ ನಿವೇಶನ ಮಂಜೂರಾಗಿದೆ. ಮಂಜೂರಾತಿ ಪತ್ರ ಪ್ರಕಾರ ಹದ್ದುಬಸ್ತ್ ಗುರುತಿಸಿಕೊಳ್ಳಿ ಎಂದರು.
ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ ನಂದಗಾಂವಿ, ಶಿಕ್ಷಣ ಪ್ರೇಮಿಗಳಾದ ಸಿದ್ದಣ್ಣ ನೊಗನಿಹಾಳ, ವಿರೂಪಾಕ್ಷ ಚೌಗಲಾ, ಶಿವಮೊಗ್ಗಿ ಥರಕಾರ, ಹುಸೇನ್ ಮುಲ್ಲಾ, ಪ್ರಾಚಾರ್ಯ ಕಿರಣ ಚೌಗಲಾ ಇತರರಿದ್ದರು.