ದಾವಣಗೆರೆ: ನರ್ಸಿಂಗ್ ಕೋರ್ಸ್ಗಳಿಗೆ ಮರುಪರೀಕ್ಷೆ ನಡೆಸುವುದನ್ನು ವಿರೋಧಿಸಿ, ಸಾಮೂಹಿಕ ನಕಲು ಆಗಿರುವ ಕಡೆಗಳಲ್ಲಿ ಮಾತ್ರವೇ ಪರೀಕ್ಷೆ ನಡೆಸುವಂತೆ ಆಗ್ರಹಿಸಿ ವಿವಿಧ ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಜಯದೇವ ವೃತ್ತದಿಂದ ಮೆರವಣಿಗೆ ಆರಂಭಿಸಿ ಮಹಾತ್ಮ ಗಾಂಧಿ ವೃತ್ತ, ಪಿ.ಬಿ.ರಸ್ತೆಯ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಮೂಲಕ ಉನ್ನತ ಶಿಕ್ಷಣ ಸಚಿವರು ಹಾಗೂ ನರ್ಸಿಂಗ್ ಬೋರ್ಡ್ನ ಅಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದರು.
ವಿದ್ಯಾರ್ಥಿನಿ ಕೌಸರ್ಬಾನು ಮಾತನಾಡಿ ರಾಜ್ಯದ ಸುಮಾರು 88 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ನ.23ರಿಂದ 25ರವರೆಗೆ ನರ್ಸಿಂಗ್ ಕೋರ್ಸ್ಗಳ ಪರೀಕ್ಷೆ ಬರೆದಿದ್ದಾರೆ. ಬೆಂಗಳೂರಿನ ಬಾಣಸವಾಡಿಯ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಸಾಮೂಹಿಕ ನಕಲು ನಡೆದಿದೆ. ಈ ಕಾರಣಕ್ಕೆ ಮರುಪರೀಕ್ಷೆ ಮಾಡುವ ನಿರ್ಧಾರದಿಂದ ಪ್ರಾಮಾಣಿಕವಾಗಿ ಓದಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎಂದರು.
ವಿದ್ಯಾರ್ಥಿನಿ ಶ್ವೇತಾ ಮಾತನಾಡಿ, ಯಾರೋ ಮಾಡಿದ ತಪ್ಪಿಗೆ ಸಾಮೂಹಿಕವಾಗಿ ಮರು ಪರೀಕ್ಷೆ ನಡೆಸಲು ಹೊರಟಿರುವುದು ಸರಿಯಲ್ಲ. ನಕಲುಕಂಡು ಬಂದ ಕೇಂದ್ರಗಳಿಗೆ ಮಾತ್ರವೇ ಮರು ಪರೀಕ್ಷೆ ಸೀಮಿತಗೊಳಿಸಬೇಕೆಂದು ಆಗ್ರಹಿಸಿದರು.
ಸಾಮಾಜಿಕ ಕಾರ್ಯಕರ್ತ ಎಚ್.ಎಸ್.ದೊಡ್ಡೇಶ್ ಮಾತನಾಡಿ ಜ.21ಕ್ಕೆ ಮರು ಪರೀಕ್ಷೆ ನಡೆಸಲು ಪರೀಕ್ಷಾ ಮಂಡಳಿ ನಿರ್ಧರಿಸಿದೆ. ಆದರೆ ನ್ಯಾಯಾಲಯವು ವಿದ್ಯಾರ್ಥಿಗಳ ಆಸಕ್ತಿಯ ಮೇರೆಗೆ ಮರು ಪರೀಕ್ಷೆ ನಡೆಸಲು ಸೂಚನೆ ನೀಡಿದೆ. ಆದರೆ ಮಂಡಳಿಯು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದೆ. ಈ ವಿಚಾರದಲ್ಲಿ ಮೊಂಡುತನ ಅನುಸರಿಸಿದರೆ ರಾಜ್ಯವ್ಯಾಪಿ ಹೋರಾಟ ತೀವ್ರವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ದೊಡ್ಡೇಶ್ ಬಳಗದ ಮುಖಂಡರಾದ ಶೇರ್ಅಲಿ, ಎನ್.ಅನಿಲ್, ಸೈಯದ್ ಮಲ್ಲಿಕ್, ಮಂಜು, ನಿಖಿಲ್, ಶಂಕರ್, ಚೇತನ್ಕುಮಾರ್ ಹಾಗೂ ವಿದ್ಯಾರ್ಥಿ- ವಿದ್ಯಾರ್ಥಿನಿಯರಿದ್ದರು.
—