ಯಾದಗಿರಿ: ತಾನೊಬ್ಬ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿ ಎಂದು ಹೇಳಿ ನಗರದಲ್ಲಿನ ಕಿರಾಣಾ, ಸೂಪರ್ ಬಜಾರ್ ಮಾಲೀಕರಿಂದ ಹಣ ವಸೂಲಿ ಮಾಡುತ್ತಿದ್ದ ನಕಲಿ ಅಧಿಕಾರಿಯನ್ನು ಹಿಡಿದ ಸಾರ್ವಜನಿಕರು, ಗೂಸಾ ಕೊಟ್ಟು ಪೊಲೀಸರಿಗೆ ಒಪ್ಪಿಸಿದ ಘಟನೆ ಗುರುವಾರ ನಡೆದಿದೆ.
ವಿಜಯಕುಮಾರ್ ಎಂಬಾತ ನಗರದಲ್ಲಿನ ಬೇಕರಿ, ಹೋಟೆಲ್ ಕಿರಣಾ ಅಂಗಡಿಗಳಿಗೆ ಭೇಟಿ ಅಲ್ಲಿನ ದಾಸ್ತಾನುಗಳನ್ನು ಪರಿಶೀಲಿಸಿ, ಧೂಳು ಕುಳಿತಿದೆ. ಅಂಗಡಿಯಲ್ಲಿ ಸ್ವಚ್ಚತೆ ಇಲ್ಲ. ಹೀಗಾಗಿ ಪರವಾನಗಿ ರದ್ದುಗೊಳಿಸುವುದಾಗಿ ಬೆದರಿಕೆ ಹಾಕಿ, ಮಾಲೀಕರಿಂದ ಹಣ ವಸೂಲಿ ಮಾಡುತ್ತಿದ್ದ. ಸುಮಾರು ಆರೇಳು ತಿಂಗಳಿಂದ ವಿಜಯಕುಮಾರ ಇದೇ ರೀತಿ ದಂಧೆ ಮಾಡಿಕೊಂಡಿದ್ದ.
ಅದರಂತೆ ಗುರುವಾರ ಸಹ ನಗರದಲ್ಲಿ ಕಿರಾಣಾ ಶಾಪ್ಗೆ ತೆರಳಿ ನಿಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಮಾಲೀಕರಿಗೆ ಧಮ್ಕಿ ಹಾಕಿದ್ದಾನೆ. ವಿಜಯಕುಮಾರ್ ಹಲ್ಚಲ್ ಕಂಡು ಅನುಮಾನಗೊಂಡ ಮಾಲೀಕ, ತಕ್ಷಣ ಪ್ರಾಧಿಕಾರದ ಅಧಿಕಾರಿ ಆಂಜನೇಯ ಬೈಕಾರ್ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಈ ಹೆಸರಲ್ಲಿ ಯಾವ ಅಧಿಕಾರಿ ನಮ್ಮಲ್ಲಿಲ್ಲ ಎಂದು ಹೇಳಿದ್ದಾರೆ.
ತಕ್ಷಣ ಅಂಗಡಿ ಮಾಲೀಕರು ಮತ್ತು ಸಾರ್ವಜನಿಕರು ವಿಜಯಕುಮಾರ್ನ್ನು ಹಿಡಿದು ನಾಲ್ಕು ಬಾರಿಸಿದ್ದಾರೆ. ಇಲಾಖೆಯ ಐಡಿ ಕಾಡರ್್ ಕೇಳಿದಾಗ ನನ್ನಿಂದ ತಪ್ಪಾಗಿದೆ ಎಂದು ಅಂಗಾಲಾಚಿದ್ದಾನೆ. ಆತನನ್ನು ತಪಾಸಣೆ ನಡೆಸಿದಾಗ ನವದೆಹಲಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಗುರುತಿನ ಚೀಟಿ ಪತ್ತೆಯಾಗಿದ್ದು, ಅದರಲ್ಲಿ ಕಲ್ಯಾಣ ವಿಭಾಗದ ಉಸ್ತುವಾರಿ ಎಂದು ನಮೂದಿಸಲಾಗಿದೆ. ಈ ಐಡಿ ನಕಲಿ ಮಾಡಿಕೊಂಡು ಯಾರ ಬಳಿ ಎಷ್ಟು ಪೀಕಿದ್ದಾನೆ ಎಂಬುದು ಪೊಲೀಸ್ ತನಿಖೆಯಿಂದ ಹೊರ ಬರಬೇಕಿದೆ.
ಯಾದಗಿರಿ ನಗರ ಠಾಣೆಗೆ ವಿಜಯಕುಮಾರನನ್ನು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಒಪ್ಪಿಸಿ ದೂರು ಸಲ್ಲಿಸಿದ್ದಾರೆ.