ಸಾಗರ: ಸಾಗುವಳಿ ಜಮೀನಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಗುರುವಾರ ತಾಲೂಕಿನ ಕಸಬಾ ಹೋಬಳಿ ಪಡವಗೋಡು ಗ್ರಾಪಂ ವ್ಯಾಪ್ತಿಯ ಹಳವಗೋಡು ಗ್ರಾಮದ ಶರಾವತಿ ಮುಳುಗಡೆ ಸಂತ್ರಸ್ತರು ಮತ್ತು ತಾಲೂಕು ಯುವ ಒಕ್ಕೂಟದ ನೇತೃತ್ವದಲ್ಲಿ ಡಿಸಿ ಹಾಗೂ ಶಿವಮೊಗ್ಗ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು.
ಹಲವು ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಹೋರಾಡುತ್ತಿರುವ ಗ್ರಾಮಸ್ಥರು ಈತನಕ ಹಕ್ಕುಪತ್ರ ಪಡೆದಿಲ್ಲ. ಎಲ್ಲ ಚುನಾಯಿತ ಪ್ರತಿನಿಧಿಗಳಿಗೆ, ತಾಲೂಕು ಮಟ್ಟದ ಅಧಿಕಾರಿಗಳಿಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ತಮ್ಮ ಗ್ರಾಮದಿಂದ 65 ಕಿಮೀ ದೂರದ ಶಿವಮೊಗ್ಗ ಡಿಸಿ ಕಚೇರಿಗೆ ಟ್ರ್ಯಾಕ್ಟರ್ನಲ್ಲಿ ಹೋಗಿ ಪ್ರತಿಭಟಿಸಿದರು. ನಿಗದಿತ ಸಂದರ್ಭದಲ್ಲಿ ಹಕ್ಕುಪತ್ರ ಕೊಡದಿದ್ದರೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದರು.
ಸಾಗರ ತಾಲೂಕಿನ ಭಾರಂಗಿ ಹೋಬಳಿಯ ಹೆಬ್ಬೂರು ಮತ್ತು ಮಲವಳ್ಳಿ, ಬನಗೋಡಿ ಹಾಗೂ ಇಂಡುವಳ್ಳಿ ಗ್ರಾಮದಲ್ಲಿ ನಾವು ವಾಸವಿದ್ದೆವು. ನಮ್ಮ ಜಮೀನು ಹಿರೇಭಾಸ್ಕರ ನಂತರ ಶರಾವತಿ ವಿದ್ಯುತ್ ಯೋಜನೆಯಿಂದ ಎರಡು ಬಾರಿ ಮುಳುಗಡೆಯಾಗಿದೆ. ಆ ಸಂದರ್ಭದಲ್ಲಿ ನಮಗೆ ಹಳವಗೋಡು ಗ್ರಾಮದಲ್ಲಿ ಜಮೀನು ಸಾಗುವಳಿಗೆ ಸರ್ಕಾರ ಅವಕಾಶ ಕಲ್ಪಿಸಿತ್ತು.
1959ರಿಂದ ನಾವು ಹಳವಗೋಡು ಗ್ರಾಮದ ಸರ್ವೆ ನಂ. 12ರಲ್ಲಿ 19 ಕುಟುಂಬಗಳು 52 ಎಕರೆ ಜಮೀನು ಸಾಗುವಳಿ ಮಾಡಿಕೊಂಡಿದ್ದೇವೆ. 1995-96ರಲ್ಲಿ ನಮ್ಮ ಜಮೀನುಗಳನ್ನು ಅರಣ್ಯಭೂಮಿಯೆಂದು ಪರಿವರ್ತಿಸಲಾಗಿದೆ. ಇದರಿಂದ ನಾವು ತೀವ್ರ ಸಂಕಷ್ಟಕ್ಕೆ ಅನುಭವಿಸುವಂತಾಗಿದೆ ಎಂದು ದೂರಿದರು.
ಪ್ರಗತಿಪರ ಯುವ ಒಕ್ಕೂಟದ ತಾಲೂಕು ಅಧ್ಯಕ್ಷ ರಮೇಶ್ ಈ.ಕೆಳದಿ, ಮುಳುಗಡೆ ಸಂತ್ರಸ್ತರಾದ ಅಶೋಕ್, ಮಹಾಬಲೇಶ್, ಕನ್ನಪ್ಪ, ಗಿರೀಶ್, ಉಮೇಶ್ ಇತರರಿದ್ದರು.