ಬೆಳವಣಿಕಿ(ತಾ. ರೋಣ): ಬುಧರಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಇರುವೆ ಹಳ್ಳ ತುಂಬಿ ಹರಿದು ಜಮೀನಿಗೆ ನುಗ್ಗಿದ್ದರಿಂದ ಬಿತ್ತನೆ ಮಾಡಿದ ಹೆಸರು, ಉಳ್ಳಾಗಡ್ಡಿ, ಮೆಣಸಿನಗಿಡ, ಗೋವಿನಜೋಳ ಬೆಳೆಗಳು ನಾಶವಾಗಿವೆ. ಸುತ್ತಲಿನ ಗ್ರಾಮಗಳಾದ ಹೊಂಬಳ, ಲಿಂಗದಾಳ, ದಾಟನಾಳ, ಬಳಗಾನೂರ ಮುಂತಾದ ಗ್ರಾಮಗಳಲ್ಲಿ ಹಳ್ಳ ತುಂಬಿ ಜಮೀನುಗಳಲ್ಲಿ ನೀರು ಆವರಿಸಿ ಬೆಳೆಗಳೆಲ್ಲ ನಾಶವಾಗಿವೆ. ಭಾರಿ ಮಳೆ ಸುರಿದಾಗ ಇಂತಹ ಘಟನೆ ಸಾಮಾನ್ಯವಾಗಿದೆ. ಇರುವೆ ಹಳ್ಳದ ಸೇತುವೆ ಬಳಿ ರಕ್ಷಣೆಗೋಡೆ ನಿರ್ವಿುಸಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ರೈತರು. ಹಳ್ಳಗಳಲ್ಲಿ ಹೂಳು ತುಂಬಿ, ಗಿಡಗಂಟೆಗಳು ಬೆಳೆದು ಹಳ್ಳ ಕಿರಿದಾಗಿದ್ದರಿಂದ ರೈತರ ಹೊಲಗಳಿಗೆ ನೀರು ನುಗ್ಗಿ ಬೆಳೆಗಳು ನಾಶವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.