ನಾಗಮಂಗಲ: ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ನಂದೀಶ್ ತಾಲೂಕಿನ ವಿವಿಧ ಚೆಕ್ಪೋಸ್ಟ್ಗಳು, ಕಚೇರಿಗಳಿಗೆ ಬುಧವಾರ ಭೇಟಿ ನೀಡಿ ತಪಾಸಣೆ ನಡೆಸಿದರು.
ತಾಲೂಕಿನ ಕದಬಹಳ್ಳಿ, ಗೊಂದಿಹಳ್ಳಿ, ಚಿಣ್ಯ ಗಡಿ ಸೇರಿದಂತೆ ಹಲವೆಡೆ ತೆರೆದಿರುವ ಚೆಕ್ಪೋಸ್ಟ್ಗಳಿಗೆ ಭೇಟಿ ನೀಡಿ ವಾಹನಗಳ ತಪಾಸಣೆ ನಡೆಸಿದರು. ಇದರ ಜತೆಗೆ ಚೆಕ್ಪೋಸ್ಟ್ಗಳಲ್ಲಿನ ಸೌಲಭ್ಯ, ಸಿಬ್ಬಂದಿ ಕುರಿತು ಮಾಹಿತಿ ಪಡೆದರು. ನಂತರ ಪಟ್ಟಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿದ್ದ ಫ್ಲೆಕ್ಸ್ಗಳನ್ನು ತೆರವುಗೊಳಿಸಿದರು.
ಪಟ್ಟಣದ ಮನ್ಮುಲ್ ಕಚೇರಿಯಲ್ಲಿ ಜನಪ್ರತಿನಿಧಿಗಳು ಸಾರ್ವಜನಿಕರಿಗೆ ಉಡುಗೊರೆ ಹಂಚುತ್ತಿದ್ದಾರೆ ಎಂಬ ದೂರಿನ ಮೇರೆಗೆ ಚುನಾವಣಾಧಿಕಾರಿ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು. ಯಾವುದೇ ಉಡುಗೊರೆ ಸಿಗದಿರುವ ಕಾರಣ ಬರಿಗೈಯಲ್ಲಿ ಹಿಂದಿರುಗಿದರು.
ತಾಲೂಕು ಪಂಚಾಯಿತಿ, ತಾಲೂಕು ಆಡಳಿತಸೌಧ, ಪುರಸಭೆ ಕಚೇರಿ ಸೇರಿದಂತೆ ಹಲವೆಡೆ ಅಳವಡಿಸಿದ್ದ ಸರ್ಕಾರಿ ಯೋಜನೆಗಳ ಪ್ರಚಾರದ ಫ್ಲೆಕ್ಸ್ಗಳನ್ನು ತಾಲೂಕು ಆಡಳಿತದಿಂದ ತೆರವುಗೊಳಿಸಲಾಯಿತು. ನೀತಿಸಂಹಿತೆ ಜಾರಿಯಾಗುತ್ತಿದ್ದಂತೆ ಮನೆಗಳು, ವಾಣಿಜ್ಯ ಮಳಿಗೆಗಳ ಮೇಲೆ ಅಳವಡಿಸಲಾಗಿದ್ದ ಬೃಹತ್ ಫ್ಲೆಕ್ಸ್ಗಳನ್ನು ಮಾಲೀಕರೆ ಸ್ವಯಂ ತೆರವುಗೊಳಿಸುತ್ತಿದ್ದ ದೃಶ್ಯ ಕಂಡುಬಂತು.
ಸಭೆ ಮೊಟಕುಗೊಳಿಸಿದ ಶಾಸಕ: ಪೂರ್ವ ನಿಗದಿಯಂತೆ ಪಟ್ಟಣದ ತಾಲೂಕು ಆಡಳಿತಸೌಧದ ನ್ಯಾಯಾಲಯ ಸಭಾಂಗಣದಲ್ಲಿ ಶಾಸಕ ಸುರೇಶ್ಗೌಡ ನೇತೃತ್ವದಲ್ಲಿ ಬಗರ್ಹುಕುಂ ಸಮಿತಿ ಸಭೆ ನಡೆಯುತ್ತಿತ್ತು. ತಾಲೂಕು ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸರ್ಕಾರದ ನಾಮನಿರ್ದೇಶನ ಸದಸ್ಯರು ಪಾಲ್ಗೊಂಡಿದ್ದರು. ನೀತಿಸಂಹಿತೆ ಜಾರಿಯಾಗುತ್ತಿದ್ದಂತೆ ಶಾಸಕ ಸುರೇಶ್ಗೌಡ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಹೊರನಡೆದರು.