ಚಿಂಚೋಳಿ: ಹೂಡದಳ್ಳಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯನ್ನು ಹತ್ಯೆಗೈದ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ ತಿಳಿಸಿದರು.
ಹೂಡದಳ್ಳಿ ಗ್ರಾಮಕ್ಕೆ ಗುರುವಾರ ಭೇಟಿ ನೀಡಿ ಬಾಲಕಿ ಕುಟುಂಬಕ್ಕೆ ಸಾಂತ್ವನ ಹೇಳಿದ ಅವರು, ಕೋಲಿ ಸಮಾಜದ ಮಹಿಳೆಯರ ಮೇಲೆ ನಿರಂತರ ಷೋಷಣೆ, ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚುತ್ತಲಿವೆ. ಇದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಇತ್ತೀಚೆಗೆ ಹತ್ಯೆಯಾದ ಬಾಲಕಿಗೆ ನ್ಯಾಯ ಕಲ್ಪಿಸಬೇಕು ಎಂದು ಮುಖ್ಯಮಂತ್ರಿ, ಗೃಹ ಸಚಿವ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜತೆ ಚರ್ಚಿಸಿದ್ದೇನೆ. ನೀವು ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ, ನಿಮ್ಮೊಂದಿಗೆ ಸಮಾಜವಿದೆ ಎಂದರು.
ಕುಟುಂಬದವರಿಗೆ ವೈಯಕ್ತಿಕವಾಗಿ 50 ಸಾವಿರ ರೂ. ಪರಿಹಾರ ನೀಡಿದರು. ಪ್ರಮುಖರಾದ ಅಮರೇಶ್ವರಿ ಚಿಂಚನಸೂರ, ಲಕ್ಷ್ಮಣ ಅವಂಟಿ, ಗೀರಿರಾಜ ನಾಟೀಕಾರ, ಶ್ರೀನಿವಾಸ ಘಾಲಿ, ಜಗನ್ನಾಥ ಇಟಗಿ, ಅನೀಲಕುಮಾರ ಹೂಡದಳ್ಳಿ, ಶರಣು ಜಂಬಗಿ, ಶರಣು ನಾಟೀಕಾರ, ಕೃಷ್ಣಾ ಚತ್ರಸಾಲ, ರಾಜು ಚಿಮ್ಮಇದಲಾಯಿ, ವಿರೇಂದ್ರ ಮಿರಿಯಾಣ, ರಾಮಲಿಂಗ ನಾಟೀಕಾರ, ಅಭಿಷೇಕ, ವೈಜನಾಥ ದಾದಿ, ಯಶವಂತ ರಾಮತೀರ್ಥ, ಶಿವಕುಮಾರ ಕೊತ್ತಪೇಟ, ಗುಂಡು ಅವರಾದಿ, ಶಿವಕುಮಾರ ಇದ್ದರು.
ಕೋಟ್ಯಾಂತರ ಹಿಂದುಗಳ ದಶಕಗಳ ಹೋರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ನ್ಯಾಯ ಕಲ್ಪಿಸಿದ್ದಾರೆ. 500 ವರ್ಷಗಳ ಇತಿಹಾಸ ಮರುಕಳಿಸುವಂತೆ ಶ್ರೀರಾಮಚಂದ್ರ ಜನ್ಮ ಭೂಮಿಯಲ್ಲಿ ಭವ್ಯ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದ್ದಾರೆ. ಅಂತೆಯೇ ಶೀಘ್ರದಲ್ಲಿ ಕೋಲಿ ಸಮಾಜವು ಎಸ್ಟಿಗೆ ಸೇರಲಿದೆ. ಪ್ರವಾಹ, ಕರೊನಾದಿಂದಾಗಿ ವಿಳಂಬವಾಗುತ್ತಿದ್ದು, ನರೇಂದ್ರ ಮೋದಿ ಅವರು ನುಡಿದಂತೆ ನಡೆದು ಕೋಲಿ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಲಿದ್ದಾರೆ.
| ಬಾಬುರಾವ ಚಿಂಚನಸೂರ, ಅಧ್ಯಕ್ಷ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ