ಚಿತ್ರದುರ್ಗ: ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದಿದ್ದರೆ ಜನರ ಕೋಪಕ್ಕೆ ತುತ್ತಾಗ ಬೇಕಾಗುತ್ತದೆ ಎಂದು ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್ಬಾಬು ಎಚ್ಚರಿಸಿದರು. ನಗರದ ತಾಪಂ ಕಚೇರಿಯಲ್ಲಿ ಸೋಮವಾರ ಅಕ್ಟೋಬರ್ ಅಂತ್ಯದವರೆಗಿನ ಪ್ರಗತಿ ಪರಿಶೀಲಿಸಿ ಮಾತನಾಡಿ,ಹಲವು ಗ್ರಾಪಂ ಗಳಲ್ಲಿ ಪಿಡಿಒಗಳು ಪ್ರಭಾರ ಹಾಗೂ ಮೂರ್ನಾಲ್ಕು ಪಂ.ಗಳಿಗೆ ನರೇಗಾ ಇಂಜಿನಿಯರ್ಗಳು ಒಬ್ಬರೇ ಇದ್ದಾರೆ.
ಆದ್ದರಿಂದ ಯಾವ ಗ್ರಾಪಂದಲ್ಲಿ ಎಂದು ಪಿಡಿಒ,ಇಂಜಿನಿಯರ್ಗಳು ಲಭ್ಯವಿರೆಂಬ ಮಾಹಿತಿಯನ್ನು ಸಾರ್ವತ್ರಿಕವಾಗಿ ಪ್ರಕಟಿಸ ಬೇಕೆಂದರು. ಇಂಜಿನಿಯರ್ಗಳು ಏನು ಕೆಲಸ ಮಾಡುತ್ತಿದ್ದಾರೆಂಬ ಮಾಹಿತಿ ಇಲ್ಲದಂತಾಗಿದ್ದು,ಉದಾಸೀನ ಮನೋಭಾವ ತೊರೆದು ಕೆಲಸ ಮಾಡ ಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕಿನ ಹಲವೆಡೆ ನರೇಗಾ ಕಾಮಗಾರಿಗಳು ಸರಿಯಾಗಿ ನಡೆದಿಲ್ಲ,ಕೆಲವು ಗ್ರಾಪಂಗಳು ಉತ್ತಮ ಪ್ರಗತಿ ತೋರಿಸಿದರೆ ಮತ್ತೇ ಕೆಲವು ಪಂಚಾಯಿತಿಗಳ ಸಾಧನೆ ಕಳಪೆಯಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ನರಸಿಂಹರಾಜ,ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್,ಸದಸ್ಯ ಕೆ.ಟಿ.ಗುರುಮೂರ್ತಿ ಮಾತನಾಡಿದರು. ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್ನಾಯ್ಕ,ಇಒ ಕೃಷ್ಣನಾಯ್ಕ ಮತ್ತಿತರರು ಇದ್ದರು.