ಬೆಳಗಾವಿ: ಕಿತ್ತೂರು & ಬೆಳಗಾವಿ ರೈಲುಮಾರ್ಗ ನಿರ್ಮಾಣಕ್ಕೆ ಅಗತ್ಯವಿರುವ 600 ಎಕರೆ ಭೂಸ್ವಾಧಿನಕ್ಕೆ ಅಗತ್ಯವಿರುವ ಪ್ರಕ್ರಿಯೆಗಳನ್ನು ತಕ್ಷಣವೇ ಆರಂಭಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಮಾನ ನಿಲ್ದಾಣ, ರೈಲ್ವೆ ಯೋಜನೆ ಸೇರಿ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆಐಎಡಿಬಿ ವತಿಯಿಂದಲೇ ಬೆಳಗಾವಿ&ಕಿತ್ತೂರು ರೈಲು ಮಾರ್ಗ ನಿರ್ಮಾಣದ ಭೂಸ್ವಾಧಿನಕ್ಕೆ ಅಧಿಸೂಚನೆ ಪ್ರಕಟಿಸಬೇಕು. ಒಂದು ವಾರದ ಒಳಗಾಗಿ ಗೆಜೆಟ್ ಅಧಿಸೂಚನೆ ಪ್ರಕಟಿಸಬೇಕು. ಬಾಗಲಕೋಟೆ&ಕುಡಚಿ ರೈಲು ಮಾರ್ಗ ನಿರ್ಮಾಣದ ಭೂಸ್ವಾಧಿನಕ್ಕೆ ಅಗತ್ಯವಿರುವ 35 ಕೋಟಿ ರೂ.ಅನುದಾನದ ಪ್ರಸ್ತಾವನೆಗೆ ತಕ್ಷಣವೇ ಮಂಜೂರಾತಿ ನೀಡಿ ಕಳಿಸಬೇಕು ಎಂದು ಸೂಚನೆ ನೀಡಿದರು.
ಬೆಳಗಾವಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ದರ್ಜೆಗೇರಿಸಲು ಅಗತ್ಯ ಇರುವ 100 ಎಕರೆ ಜಮೀನು ಒದಗಿಸಲು ಕ್ರಮ ವಹಿಸಲಾಗುವುದು. ಮುಂಬರುವ ದಿನಗಳಲ್ಲಿ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಸಂದರ್ಭದಲ್ಲಿ ಭೂ ಸ್ವಾಧಿನ ಸೇರಿ ಯಾವುದೇ ರೀತಿಯಲ್ಲಿ ಅಡೆತಡೆ ಉಂಟಾಗದಂತೆ ಈಗಿನಿಂದಲೇ ಕ್ರಮ ವಹಿಸಬೇಕು. ಭೂ ಸ್ವಾಧಿನ ಕುರಿತು ಕೂಡಲೇ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚಿಸಿದರು. ರಾಷ್ಟ್ರೀಯ ಹೆದ್ದಾರಿ&4 ಎ ಗೆ ಸಂಬಂಧಿಸಿದಂತೆ ಹೆಚ್ಚುವರಿ ಭೂಸ್ವಾಧಿನ ಪ್ರಕ್ರಿಯೆಯನ್ನು ಇದುವರೆಗೆ ಆರಂಭಿಸಿರುವುದಿಲ್ಲ.
ಆದ್ದರಿಂದ 50 ಹೆಕ್ಟೇರ್ ಭೂಸ್ವಾಧಿನಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಆರಂಭಿಸಬೇಕು. ಒಂದು ವೇಳೆ ಹೆದ್ದಾರಿ ಅಲೈನ್ ಮೆಂಟ್ ಬದಲಾಗಿದ್ದರೆ ಮುಂಚೆ ಸ್ವಾಧಿನಪಡಿಸಿಕೊಂಡಿರುವ ಜಮೀನು ಡಿನೋಟಿಫಿಕೇಶನ್ ಮಾಡಬೇಕು. ಸಾಧ್ಯವಾದರೆ ಆ ಜಮೀನು ಮೂಲ ಮಾಲೀಕರಿಗೆ ಹಿಂದಿರುಗಿಸಬೇಕು ಅಥವಾ ಹರಾಜು ಮಾಡಬೇಕು.
ಬೆಳಗಾವಿ&ಸಂಕೇಶ್ಚರ ನಡುವಿನ ಚತುಷ್ಪಥವನ್ನು ಷಟ್ಪಥವನ್ನಾಗಿ ಪರಿವರ್ತಿಸುವ ಕಾಮಗಾರಿಯನ್ನು ತಕ್ಷಣವೇ ಆರಂಭಿಸಬೇಕು ಎಂದರು. ಸಂಸದೆ ಮಂಗಲ ಅಂಗಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ, ಬೆಳಗಾವಿ ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಶಿಧರ ಬಗಲಿ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
444 ಎಕರೆ ಭೂಮಿ ಸ್ವಾಧಿನಕ್ಕೆ ನೋಟಿಸ್ ಜಾರಿ: ಬೆಳಗಾವಿ&ಕಿತ್ತೂರು ರೈಲುಮಾರ್ಗ ನಿರ್ಮಾಣಕ್ಕೆ ಅಗತ್ಯವಿರುವ 600 ಎಕರೆ ಭೂಸ್ವಾಧಿನ ಅಗತ್ಯವಿದ್ದು, ಅದಕ್ಕೆ ಸಂಬಂಧಿಸಿದಂತೆ ಈಗಾಗಲೇ 444 ಎಕರೆ ಭೂಸ್ವಾಧಿನಕ್ಕೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. 156 ಎಕರೆ ತಡೆಯಾೆ ಇತ್ತು. ಇದೀಗ ತಡೆಯಾೆ ತೆರವಾಗಿದೆ. ಭೂಸ್ವಾಧಿನ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ನಗರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ&4ಎ ಎರಡೂ ಕಡೆಯ ಸರ್ವಿಸ್ ರಸ್ತೆಯನ್ನು ದ್ವಿಪಥದಿಂದ ಚತುಷ್ಟಥವನ್ನಾಗಿ ಪರಿವರ್ತಿಸಲು ಪ್ರಸ್ತಾವನೆ ಸಿದ್ಧಪಡಿಸಬೇಕು. ಈ ರಸ್ತೆಯು ವಿಮಾನ ನಿಲ್ದಾಣ ರಸ್ತೆಯನ್ನೂ ಸಂಪರ್ಕಿಸುವುದರಿಂದ ಸರ್ವಿಸ್ ರಸ್ತೆಯನ್ನು ಚತುಷ್ಪಥವನ್ನಾಗಿ ಪರಿವರ್ತಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೂಚಿಸಿದರು.