ಚಿತ್ರದುರ್ಗ: ದುರ್ಗದ ಶಕ್ತಿ ದೇವತೆ ರಾಜಉತ್ಸವಾಂಬ ಉಚ್ಚಂಗಿ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ದೇವಿಗೆ ಕಂಕಣಧಾರಣೆಯೊಂದಿಗೆ ಶನಿ ವಾರ ಚಾಲನೆ ದೊರೆಯಿತು. ಒಂದು ವಾರ ಕಾಲ ನಡೆಯಲಿರುವ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಗಿನ ಜಾವ ದೇ ವಿಗೆ ನಾನಾ ಅಭಿಷೇಕಗಳ ಬಳಿಕ ಕಂಕಣಧಾರಣೆ,ಮದುವಣಗಿತ್ತಿ ಶಾಸ್ತ್ರ ಸೇರಿದಂತೆ ಮತ್ತಿತರ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾ ಯಿತು.
ಕೋಟೆ ರಸ್ತೆಯಲ್ಲಿರುವ ಅಮ್ಮನವರ ದೇಗುಲದಲ್ಲಿ ಶನಿವಾರ ಮುಂಜಾನೆಯಿಂದ ಶ್ರದ್ಧಾಭಕ್ತಿಯೊಂದಿಗೆ ಹಲವು ಪೂಜಾ ಕೈಂಕರ್ಯ ಗಳು ಜರುಗಿದವು. ನೂತನ ಚಿನ್ನ ಲೇಪಿತ ಬೆಳ್ಳಿ ಮುಖಪದ್ಮ ಪ್ರತಿಷ್ಠಾಪನೆ,ಕಿರೀಟ,ಬೆಳ್ಳಿ ಕತ್ತಿ,ಡಮರುಘ ಮೊದಲಾದ ಹೊಸ ಬೆಳ್ಳಿಯ ಆಭರಣಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಗರ್ಭಗುಡಿ ಹಾಗೂ ಉತ್ಸವ ಮೂರ್ತಿಗಳನ್ನು ನಾನಾ ಹೂವುಗಳಿಂದ ಅಲಂಕರಿಸಲಾಗಿತ್ತು. ವಿವಿಧ ಹಣ್ಣುಗಳಿಂದ ಸಿಂಗರಿಸಲಾಗಿತ್ತು. ಮಹಾಮಂಗಳಾರತಿ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ರಾತ್ರಿ8ರ ಸಮಯಕ್ಕೆ ದೇವಿ ಉತ್ಸವ ಮೂರ್ತಿಯನ್ನು ಬುರುಜನಹಟ್ಟಿ ಭಕ್ತರು ವಿಶೇಷ ಪುಷ್ಪಾಲಂಕಾರದೊಂದಿಗೆ ಸಿಂಹವಾಹಿನಿ ಮೂ ಲಕ ಸುಸಜ್ಜಿತ ಉಚ್ಛಾಯದಲ್ಲಿ ಪ್ರತಿಷ್ಠಾಪಿಸಿ,ನಗರದ ಬುರುಜನಹಟ್ಟಿ ಸೇರಿದಂತೆ ಮತ್ತಿತರ ಬಡಾವಣೆಗಳ ಕೆಲ ಭಕ್ತರ ಮನೆಗಳಲ್ಲಿ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ದೇವಿಯನ್ನು ಪುನಃ ದೇಗುಲಕ್ಕೆ ಕರೆದೊಯ್ಯಲಾಯಿತು.