ಸುರಪುರ : ಯಾದಗಿರಿ ಇಡೀ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಪ್ರದೇಶ ಎಂದು ಘೋಷಿಸಬೇಕು ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕರ್ಯಕರ್ತರು ಗುರುವಾರ ತಹಸಿಲ್ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಭಾವಿ ಮಾತನಾಡಿ, ರೈತರ ದುಡಿಮೆಗೆ ಬೆಲೆ ಇಲ್ಲದಂತಾಗಿದೆ. ರೈತರ ಕಷ್ಟ ಅಧಿಕಾರಿ ಮತ್ತು ಜನಪ್ರತಿನಿಧಿಗಳಿಗೆ ಯಾಕೆ ಅರ್ಥವಾಗುತ್ತಿಲ್ಲ. ರೈತರು ಬೆಳೆದ ಅನ್ನ ತಿನ್ನದೇ ಬದುಕಲು ಸಾಧ್ಯವೇ? ಮಳೆ ಇಲ್ಲದ ಕಾರಣ ಬೆಳೆಗಳು ಸಂಪೂರ್ಣ ಒಣಗುತ್ತಿವೆ. ಹತ್ತಿ, ಶೇಂಗಾ, ಭತ್ತವನ್ನು ಕಿತ್ತುಹಾಕಿ ಕುಂಟೆ ಹೊಡೆಯುತ್ತಿದ್ದಾರೆ. ಇಷ್ಟಾದರೂ ಶಹಾಪುರ ಮತ್ತು ವಡಗೇರಾ ಹೊರತುಪಡಿಸಿ ಉಳಿದ ತಾಲೂಕನ್ನು ಸಾದಾರಣ ಬರಪೀಡಿತ ಎಂದು ಘೋಷಣೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ? ಎಂದು ಪ್ರಶ್ನಿಸಿದರು.
ಹೀಗಾಗಿ ಕೂಡಲೇ ಇಡೀ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಪ್ರದೇಶ ಎಂದು ಘೋಷಿಸುವ ಮೂಲಕ ರೈತರಿಗೆ ಬರಪರಿಹಾರದ ಹಣವನ್ನು ಕೂಡಲೇ ಬಿಡುಗಡೆ ಮಾಡಿ ವಿತರಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾ ಉಪಾಧ್ಯಕ್ಷ ತಿಪ್ಪಣ್ಣ ಜಂಪಾ ಮಾತನಾಡಿ, ಸಕಾಲಕ್ಕೆ ಮಳೆ ಬಾರದೆ ರೈತರ ಸ್ಥಿತಿ ತೀವ್ರ ಚಿಂತಾಜನಕವಾಗಿ ನೆಮ್ಮದಿ ಕಳೆದುಕೊಳ್ಳುವಂತಾಗಿದೆ. ಗುರುಮಠಕಲ್, ಸುರಪುರ, ಹುಣಸಗಿ, ಯಾದಿಗಿರಿಯನ್ನು ಕೂಡ ಸಂಪೂರ್ಣ ಬರಪೀಡಿತ ಪ್ರದೇಶ ಎಂದು ಘೋಷಿಸದಿದ್ದರೆ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ರೈತ ಮುಖಂಡ ದೇವೇಂದ್ರಪ್ಪ ಬಳಿಚಕ್ರ ಮಾತನಾಡಿದರು. ಶಿವನಗೌಡ ರುಕ್ಮಾಪುರ, ಭೀಮಣ್ಣ ತಿಪ್ಪನಟಗಿ, ವೆಂಕಟೇಶ ಕುಪಗಲ್, ಮಲ್ಲಣ್ಣ ಹಾಲಭಾವಿ, ಮಾನಪ್ಪ ಕೊಂಬಿನ್, ಲೋಹಿತಕುಮಾರ, ದೇವಣ್ಣ ಎರಕಿಹಾಳ, ನಾಗಪ್ಪ ಕುಪಗಲ್, ಸೋಮಲಿಂಗ ಗುಂಡೇರ, ನಿಂಗನಗೌಡ, ಈರಮ್ಮ ಹುಣಸಗಿ, ಮಲ್ಲಮ್ಮ ಗುಳಬಾಳ ಇತರರಿದ್ದರು.