ಅಥಣಿ ಗ್ರಾಮೀಣ, ಬೆಳಗಾವಿ: ಔದ್ಯೋಗಿಕ ಕಾರ್ಖಾನೆಗಳಲ್ಲಿ ಸುರಕ್ಷಿತ ಮತ್ತು ಆರೋಗ್ಯಯುತ ಪರಿಸರ ಒದಗಿಸಬೇಕು ಎಂದು ಬೆಳಗಾವಿ ರೇಣುಕಾ ಸಕ್ಕರೆ ಕಾರ್ಖಾನೆ ಪ್ರಧಾನ ವ್ಯವಸ್ಥಾಪಕ ವೆಂಕಟೇಶ ಅದ್ವಯ್ಯು ಹೇಳಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಶಾಂತಾಬಾಯಿ ದೇಶಪಾಂಡೆ ಸಿಬಿಎಸ್ಸಿ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಐ.ಟಿ.ಐ ವಿದ್ಯಾರ್ಥಿಗಳಿಗೆ ಕೈಗಾರಿಕೆ ಸುರಕ್ಷತಾ ತರಬೇತಿ ಮತ್ತು ಆರೋಗ್ಯದ ಕೈಪಿಡಿ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಆರೋಗ್ಯ ಮತ್ತು ಸುರಕ್ಷತೆ ಬಗ್ಗೆ ಅರಿವು ಮೂಡಿಸಿ, ವೈಜ್ಞಾನಿಕ ಚಿಂತನೆ ತಿಳಿಸಬೇಕಾಗಿದೆ. ತುರ್ತು ಸಂದರ್ಭಗಳಲ್ಲಿ ಹೇಗೆ ವರ್ತಿಸಬೇಕು ಎಂಬ ಬಗ್ಗೆ ಕಾರ್ಮಿಕರಿಗೆ ಗೊತ್ತಿರಬೇಕು ಎಂದರು.
ಕೊಕಟನೂರ ರೇಣುಕಾ ಸಕ್ಕರೆ ಕಾರ್ಖಾನೆಯ ಜಿ.ಎಂ. ಸಂಜೀವ ತೇರದಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿನ ಕಾರ್ಮಿಕರು ತಮ್ಮ ಸಂಬಳದ ಹೆಚ್ಚಿನ ಭಾಗವನ್ನು ಉದ್ಯೋಗ ಸಂಬಂಧಿತ ಗಾಯ ಮತ್ತು ಅನಾರೋಗ್ಯಗಳಿಗೆ ಖರ್ಚು ಮಾಡುತ್ತಿದ್ದಾರೆ. ಇಂತಹ ದುರ್ಘಟನೆಗಳನ್ನು ತಡೆಯಬೇಕಿದೆ ಎಂದರು. ಸಹಾಯಕ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಅಡಹಳ್ಳಿ,
ಪ್ರಾಚಾರ್ಯ ದಾನೇಶ ಮಜ್ಜಗಿ, ಸಂದೀಪ ಪಾಟೀಲ, ಸಂಪತ ಧಡಕೆ, ನಿತಿನ್ ಹಾದಿಮನಿ, ಶಿವಲಿಂಗ ಐಹೊಳೆ, ಶೀತಲ ಚೌಗಲಾ ಇದ್ದರು.