ಕುಶಾಲನಗರ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲುಗುಂದ ಗ್ರಾಮದ ಆದಿಶಕ್ತಿ ದೇವಸ್ಥಾನದ 50ನೇ ವಾರ್ಷಿಕೋತ್ಸವ ಮತ್ತು ದೇವರ ಜಾತ್ರೆ ಬುಧವಾರ ಶ್ರದ್ಧಾಭಕ್ತಿಯಿಂದ ಜರುಗಿತು.
ವಾರ್ಷಿಕೋತ್ಸವ ಅಂಗವಾಗಿ ಮುಂಜಾನೆಯಿಂದಲೇ ಗಣಪತಿ ಹೋಮ, ಕಂಕಣ ಕಟ್ಟುವುದು, ಹಾರಂಗಿ ನದಿಯಿಂದ ವಾದ್ಯಗೋಷ್ಠಿಯೊಂದಿಗೆ ದೇವಸ್ಥಾನಕ್ಕೆ ಕಳಸ ತರುವುದು, ನಂತರ ಮೊವೆಳಕ್ಕು ಮೆರವಣಿಗೆ, ಅಗ್ನಿಚಟ್ಟಿ, ಮಹಾಮಂಗಳಾರತಿ, ಭಕ್ತಾದಿಗಳಿಂದ ಪೊಂಗಲ್ ಪೂಜೆ, ಹೋಮ-ಹವನ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯ ನಡೆದವು. ಮಧ್ಯಾಹ್ನ ಮಹಾಮಂಗಳಾರತಿ ಬಳಿಕ ಪ್ರಸಾದ ವಿನಿಯೋಗ ಮತ್ತು ಅನ್ನ ಸಂತರ್ಪಣೆ ನಡೆಯಿತು.
ಜಾತ್ರೆ ಅಂಗವಾಗಿ ಹುಲುಗುಂದ ಗ್ರಾಮವು ತಳಿರು-ತೋರಣಗಳಿಂದ ಸಿಂಗಾರಗೊಂಡಿತ್ತು. ಪೂಜಾ ಕಾರ್ಯಕ್ರಮದಲ್ಲಿ ಹಾರಂಗಿ, ಹುದುಗೂರು, ಕುಶಾಲನಗರ, ಕಾಳಿದೇವನ ಹೊಸೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಭಾಗವಹಿಸಿದ್ದರು. ದೇವಸ್ಥಾನ ಪ್ರಧಾನ ಆರ್ಚಕ ಶರವಣ ಕಾಳಿಮುತ್ತು ತಂಡದವರು ಪೂಜಾ ಕೈಂಕರ್ಯ ನೆರವೇರಿಸಿದರು.
ದೇವಾಲಯ ಸಮಿತಿಯ ಅಧ್ಯಕ್ಷ ಪರಮೇಶ್, ಕಾರ್ಯದರ್ಶಿ ಸುಬ್ರಮಣಿ, ಪ್ರಮುಖರಾದ ಕಣ್ಣಯ್ಯ, ಮಂಜುನಾಥ್, ಸಮಿತಿಯ ಸದಸ್ಯರು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.