ಸಾಗರ: ರೈತರ ಹಿತಾಸಕ್ತಿಗಾಗಿ ವಿಶೇಷ ಸಾಮಾನ್ಯ ಸಭೆ ಕರೆದು, ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿರುವ ರೈತರಿಗೆ ತಕ್ಷಣ ಸಾಲ ನೀಡುವಂತೆ ಒತ್ತಾಯಿಸಿ ಶುಕ್ರವಾರ ರೈತ ಸಂಘದಿಂದ ಸಾಗರದ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ನ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.
ಬ್ಯಾಂಕ್ನಲ್ಲಿ ಹಲವಾರು ರೈತರು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಎಸ್ಎಲ್ಡಿ ಬ್ಯಾಂಕ್ನಿಂದ ರೈತರ ಸಾಲ ಸೌಲಭ್ಯಕ್ಕಾಗಿ 1.50 ಕೋಟಿ ರೂ. ಬಿಡುಗಡೆ ಆಗಿದೆ. ಪಿಕಾರ್ಡ್ ಬ್ಯಾಂಕ್ನಲ್ಲಿ ಎಸ್ಎಲ್ಡಿ ನಿಯೋಜಿಸಿದ ವ್ಯವಸ್ಥಾಪಕರು ಇರಬೇಕು. ಸಾಲದ ದರಕಾಸ್ತುಗಳನ್ನು ಪರಿಗಣಿಸತಕ್ಕದ್ದು ಎಂಬ ಆದೇಶ ಹೊರಡಿಸಲಾಗಿದೆ. ಎಸ್ಎಲ್ಡಿ ನಿಯೋಜಿತ ವ್ಯವಸ್ಥಾಪಕರು ಇಲ್ಲದೆ ಹೋದಲ್ಲಿ ಸಾಲ ಮಂಜೂರು ಮಾಡುವುದಿಲ್ಲ ಎನ್ನುವ ಆದೇಶ ಬಂದಿದೆ. ಹಾಲಿ ಸಾಗರದ ಪಿಕಾರ್ಡ್ ಬ್ಯಾಂಕ್ನಲ್ಲಿ ಅಧ್ಯಕ್ಷರ ವಿನಂತಿ ಮೇರೆಗೆ ಎಸ್ಎಲ್ಸಿ ನಿಯೋಜಿತ ವ್ಯವಸ್ಥಾಪಕರಿದ್ದಾರೆ. ಆದರೆ ಅಧ್ಯಕ್ಷರ ಆದೇಶದ ಹೊರತಾಗಿಯೂ ಆಡಳಿತ ಮಂಡಳಿಯ ಕೆಲವರು ಅನಗತ್ಯವಾಗಿ ತಕರಾರು ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಸಾಲ ಪಡೆಯಲು ತೊಡಕುಂಟಾಗಿದೆ ಎಂದು ರೈತ ಸಂಘದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಪಿಕಾರ್ಡ್ ರೈತರ ಬ್ಯಾಂಕ್ ಆಗಿದೆ. ರೈತರ ಹಿತಾಸಕ್ತಿಯನ್ನು ಆಡಳಿತ ಮಂಡಳಿ ಕಾಯುವುದು ಬಿಟ್ಟು ವೈಯಕ್ತಿಕ ಪ್ರತಿಷ್ಠೆ ಬೆಳೆಸಿಕೊಳ್ಳುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಷೇರುದಾರರ ಜತೆ ಚರ್ಚೆ ನಡೆಸಲು ತುರ್ತು ವಿಶೇಷ ಸಾಮಾನ್ಯ ಸಭೆಯನ್ನು ಕರೆಯಬೇಕು. ಎಸ್ಎಲ್ಡಿ ನೀಡಿದ ಸಾಲದ ಅವಧಿ ಮುಗಿಯುತ್ತಿದ್ದು, ಹಣ ವಾಪಾಸ್ ಹೋಗುವುದರೊಳಗೆ ಸಭೆ ಕರೆದು ಅರ್ಜಿ ಸಲ್ಲಿಸಿದ ರೈತರಿಗೆ ಸಾಲ ಬಿಡುಗಡೆ ಮಾಡಬೇಕು. ಸೋಮವಾರದೊಳಗೆ ರೈತರಿಗೆ ಸಾಲ ನೀಡದೆ ಹೋದಲ್ಲಿ ಬ್ಯಾಂಕ್ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.