ಸೊರಬ: ಸರ್ಕಾರ ನೀಡುವ ಅನುದಾನವನ್ನು ಸಾರ್ವಜನಿಕರ ಸಹಕಾರದಿಂದ ಸಮರ್ಪಕವಾಗಿ ಬಳಸಿಕೊಂಡು ಪಟ್ಟಣವನ್ನು ಸುಂದರವಾಗಿಸುವುದೇ ನಮ್ಮ ಉದ್ದೇಶ ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.
ಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನದ ಬನ್ನಿಮಂಟಪ ನಿರ್ಮಾಣ, ಸೊರಬ-ಸಾಗರ ಮುಖ್ಯರಸ್ತೆಯಿಂದ ಕೋರ್ಟ್ ಹಾಗೂ ಬಂಗಾರಪ್ಪ ಕ್ರೀಡಾಂಗಣ ಮೂಲಕ ಹಾದುಹೋಗುವ ಕೈಗಾರಿಕಾ ಕೇಂದ್ರದವರೆಗಿನ ರಸ್ತೆ ಅಭಿವೃದ್ಧಿ, ಕನ್ನಡ ಸಾಹಿತ್ಯ ಪರಿಷತ್ ಭವನ ನಿರ್ಮಾಣ ಮತ್ತಿತರ ಕಾಮಗಾರಿಗಳಿಗೆ ಮಂಗಳವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಸರ್ಕಾರವು ಅಭಿವೃದ್ಧಿಪರ ಚಿಂತನೆಗಳನ್ನಿಟ್ಟುಕೊಂಡು ಅನುದಾನ ಬಿಡುಗಡೆ ಮಾಡುತ್ತಿದೆ. ಗುಣಮಟ್ಟದ ಕಾಮಗಾರಿ ನಡೆಯುವಂತೆ ಅಧಿಕಾರಿಗಳು ಎಚ್ಚರವಹಿಸಬೇಕು. ಅಭಿವೃದ್ಧಿ ಕಾರ್ಯಗಳಿಗೆ ಸಾರ್ವಜನಿಕರೂ ಕೈಜೋಡಿಸಿದಾಗ ಇನ್ನಷ್ಟು ಕಾರ್ಯಗಳನ್ನು ಮಾಡಲು ಸ್ಫೂರ್ತಿ ಸಿಗುತ್ತದೆ ಎಂದರು.