ಕೊಪ್ಪ: ಹಕ್ಕುಪತ್ರ ಪಡೆದವರು ಗ್ರಾಮ ಪಂಚಾಯಿತಿ ಮೂಲಕ ಅಗತ್ಯವಾಗಿ ಇ-ಸ್ವತ್ತು ಮಾಡಿಸಿಕೊಳ್ಳಬೇಕು. ಇದರಿಂದ ಸಾಲ ಸೌಲಭ್ಯ ಪಡೆಯಲು ಸಾಧ್ಯವಾಗಲಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು. ತಾಲೂಕು ಆಡಳಿತ ಸೌಧದಲ್ಲಿ ಶನಿವಾರ 94ಸಿ ಅಡಿ 73 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, ಅರಣ್ಯ ಇಲಾಖೆ ಅನುಮತಿ ಪಡೆದು ಹಕ್ಕುಪತ್ರ ವಿತರಿಸುವಂತೆ ಸರ್ಕಾರ ಹೊಸ ಆದೇಶ ಹೊರಡಿಸಿದ್ದರಿಂದ ಪ್ರಕ್ರಿಯೆ ವಿಳಂಬವಾಗಿದೆ. ಹಕ್ಕುಪತ್ರ ಕೊಟ್ಟಿಲ್ಲ ಎಂದು ಶಾಸಕರು ಹಾಗೂ ತಹಸೀಲ್ದಾರ್ ಅವರನ್ನು ದೂರುವುದು ಸರಿಯಲ್ಲ ಎಂದರು.ಸೊಪ್ಪಿನ ಬೆಟ್ಟ ಪ್ರದೇಶಕ್ಕೆ ಹಕ್ಕುಪತ್ರ ನೀಡಲು ಈ ಹಿಂದೆ ಅವಕಾಶವಿತ್ತು. ಆದರೆ ಸರ್ಕಾರದ ಹೊಸ ಆದೇಶದಿಂದಾಗಿ ಅನೇಕರು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅರಣ್ಯ ಸಮಸ್ಯೆ ಎದುರಿಸುತ್ತಿರುವ 73 ಅರ್ಜಿದಾರರಿಗೆ ಇಲಾಖೆ ಅನುಮತಿ ಪಡೆದು ಹಕ್ಕುಪತ್ರ ನೀಡಲಾಗುತ್ತಿದೆ ಎಂದು ತಿಳಿಸಿದರು. ತಹಸೀಲ್ದಾರ್ ವಿಮಲಾ ಸುಪ್ರಿಯ, ಪಪಂ ಸದಸ್ಯ ರಶೀದ್, ಜಿಪಂ ಮಾಜಿ ಅಧ್ಯಕ್ಷ ಎಚ್.ಎಂ.ಸತೀಶ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷೆ ಅನ್ನಪೂರ್ಣ ನರೇಶ್ ಇತರರಿದ್ದರು.