ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ತಾಲೂಕು ಆಸ್ಪತ್ರೆಯಲ್ಲಿ ಜನರೇಟರ್ ದುರಸ್ತಿ ಪಡಿಸದೆ, ವಿದ್ಯುತ್ ವ್ಯತ್ಯಯ ಉಂಟಾಗಿ ಮೊಂಬತ್ತಿ ಬೆಳಕಿನಲ್ಲಿ ಚಿಕಿತ್ಸೆ ನೀಡುತ್ತಿರುವ ವಿಚಾರವಾಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ಹಾಗೂ ವೈದ್ಯರ ನಡುವೆ ಬುಧವಾರ ಮಾತಿನ ಚಕಮಕಿ ನಡೆಯಿತು.
ಇದು ಆಡಳಿತ ನಿರ್ಲಕ್ಷೆ ಅಲ್ಲದೆ, ಮತ್ತೇನು ಎಂದು ಶಾಸಕರು ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ವಿಡಿಯೋ ಮಾಡಿದ್ದು, ಅದು ವೈರಲ್ ಆಗಿದ್ದು, ಹೇಗೆ ಎಂದು ಡಾ.ಸುರೇಂದ್ರಬಾಬು ಅವರನ್ನು ಪ್ರಶ್ನಿಸಿದರು.
ಮೇಣದ ಬತ್ತಿ ಬೆಳಕಿನಲ್ಲಿ ಚಿಕಿತ್ಸೆ ನೀಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಇಡೀ ರಾತ್ರಿ ರೋಗಿಗಳು ಮೊಬೈಲ್ ಟಾರ್ಚ್ನಲ್ಲಿ ಕಾಲ ಕಳೆದಿದ್ದರು. ಈ ಕುರಿತು ಮಾಜಿ ಸಚಿವ ಬಿ.ಶ್ರೀರಾಮುಲು, ಬಿಜೆಪಿ ಕರ್ನಾಟಕ ಫೇಸ್ಬುಕ್ ಪೇಜ್ನಲ್ಲಿ ಕತ್ತಲಿನಲ್ಲಿ ಚಿಕಿತ್ಸೆಯೆಂದು ಪೋಸ್ಟ್ ಮಾಡಿದ್ದರು.
ಸರ್ಕಾರದ ವಿರುದ್ಧ ವಾಗ್ದಾಳಿ ಹಿನ್ನಲೆಯಲ್ಲಿ ಶಾಸಕರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ವಿಡಿಯೋ ವೈರಲ್ ಕುರಿತು ನನಗೆ ಗೊತ್ತಿಲ್ಲವೆಂದ ಡಾ.ಸುರೇಂದ್ರಬಾಬುಗೆ ಸ್ವಾಮಿ ನಮಸ್ಕಾರ ಎಂದು ಕೈ ಮುಗಿದರು.
ನನಗೆ ನಿಮ್ಮ ಕುರಿತು ಎಲ್ಲವೂ ಗೊತ್ತಿದೆ. ತನಿಖೆಯಾಗಲಿ ಎಂದು ಶಾಸಕರು ಕೆಂಡಾಮಂಡಲವಾದರು. ಬೆಂಬಲಿಗರು ಮತ್ತು ವೈದ್ಯರ ನಡುವೆಯೂ ಕೆಲಕಾಲ ಮಾತಿನ ಚಕಮಕಿ ನಡೆಯಿತು.