ಚಾಮರಾಜನಗರ: ಹನೂರು ಪಟ್ಟಣ ಸಮೀಪದ ಆರ್.ಎಸ್.ದೊಡ್ಡಿಯ ಜಮೀನಿನಲ್ಲಿ ಅಕ್ರಮವಾಗಿ ನಾಡ ಬಂದೂಕು ಹೊಂದಿದ್ದ ಇಬ್ಬರನ್ನು ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.
ಆರ್.ಎಸ್.ದೊಡ್ಡಿಯ ಸಿದ್ದಶೆಟ್ಟಿ (56) ಹಾಗೂ ಬಸವರಾಜು (43) ಬಂಧಿತರು.
ಗ್ರಾಮ ಸಮೀಪದಲ್ಲಿ ರಮೇಶ್ ನಾಯ್ಡು ಎಂಬುವರ ಜಮೀನನ್ನು ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದ ಇವರು, ಪರವಾನಿಗೆ ಇಲ್ಲದ ನಾಡ ಬಂದೂಕನ್ನು ಹೊಂದಿದ್ದರು ಎನ್ನಲಾಗಿದೆ. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ರಾತ್ರಿ 7.30 ರಲ್ಲಿ ಹನೂರು ಠಾಣಾ ಇನ್ಸ್ಪೆಕ್ಟರ್ ಶಶಿಕುಮಾರ್ ಮಾರ್ಗದರ್ಶನದಲ್ಲಿ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಪ್ರಸಾದ್ ಹಾಗೂ ಸಿಬ್ಬಂದಿ ತಂಡ ದಾಳಿ ನಡೆಸಿ ನಾಡ ಬಂದೂಕನ್ನು ವಶಪಡಿಸಿಕೊಂಡರು. ಆರೋಪಿಗಳನ್ನು ಬುಧವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಚಂದ್ರು, ರಾಮಕೃಷ್ಣ, ರಾಘವೇಂದ್ರ, ಮಣಿಕಂಠ, ರಾಜು ಕಾರ್ಯಾಚರಣೆಯಲ್ಲಿದ್ದರು.