ಬೆಳಗಾವಿ: ಜಿಲ್ಲೆಯಲ್ಲಿ ಸೋಮವಾರ ಸಂಜೆ ಸುರಿದ ಅಕಾಲಿಕ ಮಳೆ ತಂಪೆರೆಯಿತು. ಹಲವೆಡೆ ಬೀಸಿದ ಮಳೆ-ಗಾಳಿಯಿಂದಾಗಿ ಹಲವು ಮನೆಗಳ ತಗಡಿನ ಛಾವಣಿ ಹಾರಿ, ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆ ವರದಿಯಾಗಿದೆ.
ತಾಲೂಕಿನ ಅಗಸಗಿ ಗ್ರಾಮದಲ್ಲಿ ಸಿಡಿಲು ಬಡಿದು ಸ್ಥಳೀಯ ನಿವಾಸಿ ಶಿವಾಜಿ ಅಪ್ಪಯ್ಯ ಬಚ್ಚಿನಟ್ಟಿ ಎಂಬುವರಿಗೆ ಸೇರಿದ ಎರಡು ಮೇವಿನ ಬಣವೆಗಳು ಬೆಂಕಿಗೆ ಆಹುತಿಯಾಗಿವೆ. ಮಳೆಯಿಂದಾಗಿ ಸುಳೇಬಾವಿ ಗ್ರಾಮದಲ್ಲಿ ಐದಾರು ಮನೆಗಳ ತಗಡಿನ ಛಾವಣಿ ಹಾರಿ ನೆಲಕ್ಕುರುಳಿವೆ. ಮಳೆಯಿಂದಾಗಿ ನಗರದಲ್ಲಿ ಸಂಜೆಯ ವೇಳೆಗೆ ತಂಪಾದ ವಾತಾವರಣ ನಿರ್ಮಾಣವಾಗಿತ್ತು. ನಗರ ಪ್ರದೇಶದ ಮಾರುತಿಗಲ್ಲಿ, ಹಳೇ ಪಿಬಿ ರಸ್ತೆ, ಮಾಧ್ವ ರಸ್ತೆ, ಶಹಾಪುರ, ವಡಗಾವ ಮತ್ತು ತಿಳಕವಾಡಿಯ ಮತ್ತಿತರ ಪ್ರದೇಶಗಳಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿದ ಕಾರಣ ಸಾರ್ವಜನಿಕರು ಹಾಗೂ ಪ್ರಯಾಣಿಕರು ಕೆಲಕಾಲ ಸಮಸ್ಯೆ ಅನುಭವಿಸಿದರು. ಖಾನಾಪುರ, ಹುಕ್ಕೇರಿ,
ಸಂಕೇಶ್ವರ, ನಿಪ್ಪಾಣಿ, ಚಿಕ್ಕೋಡಿ, ಗೋಕಾಕ, ಬೈಲಹೊಂಗಲ, ಕಿತ್ತೂರು, ಎಂ.ಕೆ.ಹುಬ್ಬಳ್ಳಿ ಹಾಗೂ ಸವದತ್ತಿ ತಾಲೂಕಿನ ವಿವಿಧೆಡೆ ಮಳೆಯಾಗಿದೆ.