ಬೆಂಗಳೂರು: ಜೊಮ್ಯಾಟೊ ಡೆಲಿವರಿ ಬಾಯ್ ಒಬ್ಬನಿಂದ ಹಲ್ಲೆಯಾಗಿದ್ದಾಗಿ ಹೇಳಿ ಯುವತಿಯೊಬ್ಬಳು ಪೊಲೀಸ್ ಪ್ರಕರಣ ದಾಖಲಿಸಿರುವ ವಿಚಾರ ನಿಮಗೆಲ್ಲ ಗೊತ್ತೇ ಇದೆ. ಇದೀಗ ಅದೇ ಪ್ರಕರಣದ ಮತ್ತೊಂದು ಮುಖವೂ ಹೊರಬಿದ್ದಿದೆ. ಊಟವನ್ನು ಕೊಡಲು ಹೋದಾಗ ಯುವತಿ ಏನೇನು ಮಾಡಿದಳು ಎನ್ನುವುದನ್ನು ಆರೋಪಿ ಸ್ಥಾನದಲ್ಲಿರುವ ಡೆಲಿವರಿ ಬಾಯ್ ವಿವರಿಸಿದ್ದಾನೆ.
ಜೊಮ್ಯಾಟೋ ಡೆಲಿವರಿ ಬಾಯ್ ಕಾಮರಾಜ್ ವಿರುದ್ಧ ಹಿತೇಶಾ ಚಂದ್ರಾಣಿ ಹೆಸರಿನ ಇನ್ಸ್ಟಾಗ್ರಾಂ ಇನ್ಫ್ಲೂಯೆನ್ಸರ್ ದೂರು ನೀಡಿದ್ದಳು. ಊಟ ತಂದು ಕೊಡುವುದು ಒಂದು ಗಂಟೆ ತಡವಾಗಿತ್ತು, ಅದಕ್ಕಾಗಿ ನಾನು ಸಿಬ್ಬಂದಿಯಿಂದ ಸ್ಪಷ್ಟನೆಗಾಗಿ ಕಾಯುತ್ತಿದ್ದೆ. ಆದರೆ ಅಷ್ಟರೊಳಗೆ ನನಗೆ ಬೈದು, ಮುಖಕ್ಕೆ ಪಂಚ್ ಮಾಡಿ ಓಡಿ ಹೋಗಿದ್ದಾನೆ ಎಂದು ಆಕೆ ದೂರಿದ್ದಳು. ಮೂಗಿನಿಂದ ರಕ್ತ ಸುರಿಯುತ್ತಿರುವ ವಿಡಿಯೋವನ್ನೂ ಮಾಡಿ ಹರಿಬಿಟ್ಟಿದ್ದಳು. ಆದರೆ ಆ ಗಾಯ ಆಕೆಯೇ ಮಾಡಿಕೊಂಡಿದ್ದು ಎಂದು ಕಾಮರಾಜ್ ಹೇಳಿದ್ದಾನೆ.
ನಾನು 45-50 ನಿಮಿಷ ತಡವಾಗಿ ಹೋಗಿದ್ದೆ. ಹೋದ ತಕ್ಷಣ ಅವರ ಬಳಿ ಆ ವಿಚಾರವಾಗಿ ಕ್ಷಮೆ ಯಾಚಿಸಿದೆ. ಆದರೆ ಅದನ್ನು ಪರಿಗಣಿಸದ ಅವರು ಬೈಯಲಾರಂಭಿಸಿದರು. ರಸ್ತೆಯಲ್ಲಿ ಕಾಮಗಾರಿಗಳು ಆಗುತ್ತಿದ್ದರಿಂದಾಗಿ ತಡವಾಯಿತೆಂದು ತಿಳಿಸಲು ಪ್ರಯತ್ನಿಸಿದೆ. ಅವರು ಊಟವನ್ನು ನನ್ನಿಂದ ಪಡೆದುಕೊಂಡರು. ಆದರೆ ಊಟದ ಹಣವನ್ನು ಕೊಡಲು ನಿರಾಕರಿಸಿದರು. ಜೊಮ್ಯಾಟೋದವರು ಕೊನೆ ಕ್ಷಣದಲ್ಲಿ ಆರ್ಡರ್ ಕ್ಯಾನ್ಸಲ್ ಮಾಡಿದ್ದಾಗಿ ಹೇಳಿದರು. ಹಾಗಾದರೆ ಊಟ ವಾಪಾಸು ಕೊಡಿ ಎಂದು ಕೇಳಿದೆ. ಅದಕ್ಕೂ ಒಪ್ಪಲಿಲ್ಲ. ಅದಾದ ಮೇಲೆ ಅವರು ನನ್ನನ್ನು ಆಳು ಎಂದು ಕರೆದರು. ಹಿಂದಿಯಲ್ಲಿ ಬೈಯಲಾರಂಭಿಸಿದಳು. ಏನು ಬೇಕಾದರೂ ಮಾಡಿಕೋ ಹೋಗು ಎಂದು ಕೂಗಾಡಲಾರಂಭಿಸಿದರು ಎಂದು ಕಾಮರಾಜ್ ಹೇಳಿದ್ದಾನೆ.
ನಾನು ಎರಡು ವರ್ಷಗಳಿಂದ ಜೊಮ್ಯಾಟೋದಲ್ಲಿ ಕೆಲಸ ಮಾಡುತ್ತಿದ್ದೇನೆ. ಇಂತಹ ಗ್ರಾಹರನ್ನು ನಾನು ಹಿಂದೆಂದೂ ನೋಡಿರಲಿಲ್ಲ. ಇವರಿಂದ ನನಗೆ ದುಡ್ಡು ಸಿಗುವುದಿಲ್ಲ ಎನಿಸಿ ವಾಪಾಸು ಹೋಗಲೆಂದು ಲಿಫ್ಟ್ ಬಳಿ ಹೊರಟೆ. ಆಗ ಆಕೆ ನನ್ನ ಮೇಲೆ ಚಪ್ಪಲಿ ಎಸೆದರು. ಅದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ನಾನು ಕೈ ಅಡ್ಡ ಹಿಡಿದೆ. ನನ್ನ ಕೈ ತೆಗೆದು ಹೊಡೆಯಲು ಬಂದರು, ಆಗ ನಾನೂ ನನ್ನ ರಕ್ಷಣೆ ಮಾಡಿಕೊಳ್ಳಬೇಕಾಗಿ ಬಂತು. ಆಗ ಅವರದ್ದೇ ಕೈ ಬೆರಳಿನಲ್ಲಿದ್ದ ಉಂಗುರ ಅವರ ಮೂಗಿಗೆ ತಾಕಿತು. ಅದರಿಂದ ಗಾಯವಾಗಿ ರಕ್ತ ಸುರಿಯಿತು. ಆ ಫೋಟೋ ನೋಡಿದ ಯಾರಿಗಾದರೂ ಅದು ಪಂಚ್ನಿಂದ ಆದ ಗಾಯವಲ್ಲ ಎನ್ನುವುದು ತಿಳಿಯುತ್ತದೆ. ನಾನು ಉಂಗುರವನ್ನೂ ತೊಡುವುದಿಲ್ಲ ಎಂದು ಅವನು ಹೇಳಿಕೊಂಡಿದ್ದಾನೆ.
ನಾನು ಲಿಫ್ಟ್ ಬಳಿ ಹೋಗಲು ಆ ಯುವತಿ ಬಿಡಲಿಲ್ಲ. ಅದಕ್ಕಾಗಿ ನಾನು ಮೆಟ್ಟಿಲಲ್ಲಿ ಓಡಿ ಬಂದೆ. ಅದಾದ ಮೇಲೆ ದೆಹಲಿಯ ಜೊಮ್ಯಾಟೋ ಸಪೋರ್ಟ್ ಸಿಸ್ಟಮ್ಗೆ ವಿಚಾರ ತಿಳಿಸಿದೆ. ಅವರು ಸಮಸ್ಯೆಯನ್ನು ಅರ್ಥ ಮಾಡಿಕೊಂಡು, ಸಹಾಯ ಮಾಡುವುದಾಗಿ ಹೇಳಿದರು. ಯುವತಿ ನನ್ನ ಮೇಲೆ ಮಾಡಿದ ದಾಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದನ್ನು ನೋಡಿದರೆ ಸರಿಯಾಗಿ ತಿಳಿದುಬರುತ್ತದೆ ಎಂದು ಹೇಳಿದ್ದಾನೆ.
ಸಂಜೆ 6.30ರ ಸಮಯಕ್ಕೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ವಿಚಾರಣೆಗೆ ಬರಲು ಹೇಳಿದ್ದರು. ಅಲ್ಲಿ ಸರಿಯಾಗಿ ಮಾಹಿತಿ ಪಡೆದಿದ್ದಾರೆ. ಆದರೆ ಈಗ ನನಗೆ ಕಾನೂನಾತ್ಮಕವಾಗಿ ಹೋರಾಡಲು 25 ಸಾವಿರ ರೂಪಾಯಿ ಹಣ ಖರ್ಚಾಗಲಿದೆ ಎಂದು ಕಾಮರಾಜ್ ತನ್ನ ಅಳಲನ್ನು ತೋಡಿಕೊಂಡಿದ್ದಾರೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
ಊಟ ಡೆಲಿವರಿ ಲೇಟಾಗಿದ್ದಕ್ಕೆ ಮುಖಕ್ಕೆ ಪಂಚ್ ಹೊಡೆಸಿಕೊಂಡ ಯುವತಿ! ಇನ್ಫ್ಲೂಯೆನ್ಸರ್ ಕಥೆ ಕೇಳೋರ್ಯಾರು?