ನವದೆಹಲಿ: ಐಸಿಸಿ ವಿಶ್ವಕಪ್ನಿರೂಪಣೆಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದ ಖ್ಯಾತ ನಿರೂಪಕಿ ಝೈನಾಬ್ ಅಬ್ಬಾಸ್ ವೈಯಕ್ತಿಕ ಕಾರಣಗಳಿಂದಾಗಿ ಭಾರತದಿಂದ ನಿರ್ಗಮಿಸಿರುವ ಕ್ರಮವನ್ನು ಪಾಕ್ ವಿದೇಶಾಂಗ ಇಲಾಖೆ ಖಂಡಿಸಿದೆ.
ಈ ಕುರಿತು ಪ್ರಕಟಣೆಯನ್ನು ಹೊರಡಿಸಿರುವ ಪಾಕ್ ವಿದೇಶಾಂಗ ಇಲಾಖೆ ಭದ್ರತೆಯ ದೃಷ್ಟಿಯಿಂದ ನಿರೂಪಕಿ ಝೈನಾಬ್ ಅಬ್ಬಾಸ್ ಭಾರತವನ್ನು ತೊರೆದಿದ್ದಾರೆ. ವೈಯಕ್ತಿಕ ಕಾರಣಗಳಿಂದಲ್ಲ ಎಂದು ತಿಳಿಸಿದೆ.
ಸತ್ಯಕ್ಕೆ ದೂರವಾದದ್ದು
ಈ ಕುರಿತು ಮಾತನಾಡಿರುವ ಪಾಕಿಸ್ತಾನ ವಿದೇಶಾಂಗ ಇಲಾಖೆಯ ವಕ್ತಾರೆ ಮುಮ್ತಾಜ್ ಜಹ್ರಾ ಬಲೋಚ್, ನಿರೂಪಕಿ ಝೈನಾಬ್ ಅಬ್ಬಾಸ್ ಅವರ ವಿರುದ್ಧ ಭಾರತದಲ್ಲಿ ಮಾಡಲಾಗಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಆಧಾರರಹಿತವಾಗಿವೆ. ಅವರು ಸುರಕ್ಷತೆಯ ಕಾಳಜಿಯಿಂದ ಹಿಂತಿರುಗಿದ್ದಾರೆ ಹೊರತು ವೈಯಕ್ತಿಕ ಅಥವಾ ಅವರನ್ನು ಗಡಿಪಾರು ಮಾಡಲಾಗಿಲ್ಲ.
ಜೈನಾಬ್ ಅವರು ಮಾಡಿರುವ ಟ್ವೀಟ್ಗಳಿಗೆ ಸಂಬಂಧಿಸಿದಂತೆ ಅವರ ವಿರುದ್ಧ ಪ್ರಕರಣ ದಾಖಲಿಸಿರುವುದು ಸರಿಯಾದ ಕ್ರಮವಲ್ಲ. ಸುಖಾಸುಮ್ಮನೆ ಆಧಾರರಹಿತ ಆರೋಪಗಳನ್ನು ಮಾಡಿ ದ್ವೇಷ ಸಾಧಿಸುವುದು ಸರಿಯಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆಯ ವಕ್ತಾರೆ ಮುಮ್ತಾಜ್ ಜಹ್ರಾ ಬಲೋಚ್ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಅಪರಾಧದ ಸ್ವರೂಪವನ್ನು ಪರಿಗಣಿಸಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಬೇಕು; ಸುಪ್ರೀಂ ಕೋರ್ಟ್ಗೆ ಬಿಲ್ಕಿಸ್ ಬಾನೊ ಮನವಿ
ಕಟ್ಟು ಕಥೆಗಳನ್ನು ಹೇಳುವುದನ್ನು ಮೊದಲು ನಿಲ್ಲಿಸಲಿ
ಇತ್ತ ಪಾಕಿಸ್ತಾನದ ಆರೋಪಕ್ಕೆ ತಿರುಗೇಟು ನೀಡಿರುವ ವಕೀಲ ವಿನೀತ್ ಜಿಂದಾಲ್ ಝೈನಾಬ್ ಅವರು ಭಾರತದಲ್ಲಿ ತಮ್ಮ ಸುರಕ್ಷತೆ ಬಗ್ಗೆ ಭಯ ಕಾಡಿದ್ದರೆ ಅವರು ಹೆಚ್ಚಿನ ಭದ್ರತೆಯನ್ನು ಕೇಳಿ ಪಡೆಯಬಹುದಿತ್ತು. ಭಾರತ ಮತ್ತು ಹಿಂದೂ ಧರ್ಮವನ್ನು ಯಾರೇ ಅವಮಾನಿಸಿದರವಿಗೆ ನಮ್ಮ ದೇಶದಲ್ಲಿ ಬಿಸಿ ಮುಟ್ಟಿಸಲಾಗುತ್ತದೆ. ಅದು ಬಿಟ್ಟು ಪಾಕಿಸ್ತಾನ ಕಟ್ಟು ಕಥೆಗಳನ್ನು ಹೇಳುವುದನ್ನು ಮೊದಲು ನಿಲ್ಲಿಸಲಿ ಎಂದು ತಿರುಗೇಟು ನೀಡಿದ್ದಾರೆ.
ಭಾರತ, ಹಿಂದೂ ಧರ್ಮ ಭಾರತದಲ್ಲಿ ಪೂಜೆ ಮಾಡುವ ದೇವರು ಹಾಗೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ 2014ರಲ್ಲಿ ಜೈನಾಬ್ ಅಬ್ಬಾಸ್ ಟ್ವೀಟ್ ಮಾಡಿದ್ದರು. ಈ ಕುರಿತಾಗಿ ವಕೀಲ ವಿನೀತ್ ಜಿಂದಾಲ್, ಜೈನಾಬ್ ಅಬ್ಬಾಸ್ ವಿರುದ್ಧ ದೂರು ದಾಖಲು ಮಾಡಿದ್ದರು. ಸೈಬರ್ ಕ್ರೈಮ್ನಲ್ಲಿ ದೂರು ದಾಖಲಾದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ ಆಕೆ ಮಾಡಿರುವ ಟ್ವೀಟ್ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಡಿಲೀಟ್ ಮಾಡಲಾಗಿತ್ತು.
ಪಾಕಿಸ್ತಾನದ ಕ್ರೀಡಾ ನಿರೂಪಕಿ ಜೈನಾಬ್ ಅಬ್ಬಾಸ್, 2023ರ ಕ್ರಿಕೆಟ್ ಏಕದಿನ ವಿಶ್ವಕಪ್ ಟೂರ್ನಿಯ ನಿರೂಪಣೆಗಾಗಿ ಇತ್ತೀಚೆಗೆ ಭಾರತಕ್ಕೆ ಬಂದಿದ್ದರು. ಪಾಕಿಸ್ತಾನದ ಟಿವಿ ನಿರೂಪಕಿ ಜೈನಾಬ್ ಅಬ್ಬಾಸ್ ಅವರನ್ನು ಭಾರತದಿಂದ ಪಾಕಿಸ್ತಾನಕ್ಕೆ ಗಡಿಪಾರು ಮಾಡಲಾಗಿದೆ ಎಂದು ಸ್ವತಃ ಅವರು ಪ್ರತಿನಿಧಿಸುವ ಟಿವಿ ವಾಹಿನಿಯೇ ತಿಳಿಸಿತ್ತು.