ಬೆಂಗಳೂರು: ಪುನೀತ್ ರಾಜ್ಕುಮಾರ್ ನಿಧನಕ್ಕೂ ಮುನ್ನ ಅವರು ಒಂದಿಷ್ಟು ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಂಡಿದ್ದರು. ಆದರೆ, ಈಗ ಅವರು ನಮ್ಮೊಂದಿಗೆ ಇಲ್ಲ. ಹಾಗಾಗಿ, ಅವರು ನಟಿಸ ಬೇಕಾದ ಚಿತ್ರಗಳ ಗತಿ ಏನು ಎಂಬ ಪ್ರಶ್ನೆ ಹಲವರಲ್ಲಿ ತುಂಬಾ ಕಾಡುತ್ತಿದೆ. ಅಪ್ಪುಗಾಗಿ ಬರೆದ ಕಥೆಗಳು ಮತ್ತು ಅಪ್ಪು ಒಪ್ಪಿಕೊಂಡ ಸಿನಿಮಾಗಳಲ್ಲಿ ಬೇರೆ ಯಾರು ನಟಿಸ ಬಹುದು ಎಂಬ ಕುತೂಹಲ ಸಹಜವಾಗಿಯೇ ಇದೆ. ಆದರೆ, ಇದೀಗ ಆ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಅಪ್ಪು ಸ್ಥಾನವನ್ನು ರಾಘಣ್ಣನ ಪುತ್ರ ನಟ ಯುವ ರಾಜ್ಕುಮಾರ್ ತುಂಬಿಲಿದ್ದಾರೆ ಎಂಬ ಸುದ್ದಿ ಸದ್ಯ ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದೆ.
ಹೌದು, ಜನರ ನೆಚ್ಚಿನ ಪವರ್ ಸ್ಟಾರ್ ಕೊನೆಯದಾಗಿ ನಟಿಸಿದ ಚಿತ್ರ ಅಂದರೆ ಅದು ‘ಜೇಮ್ಸ್‘. ಹಾಗಾಗಿ, ಈ ಸಿನಿಮಾದಲ್ಲಿ ಅಪ್ಪು ಅಭಿಮಾನಿಗಳು ಅಪ್ಪು ಅವರನ್ನು ಮತ್ತೊಂದು ಬಾರಿ ತೆರೆ ಮೇಲೆ ಕಂಡು ಕಣ್ತುಂಬಿಕೊಳ್ಳಬಹುದು. ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ಶೀಘ್ರದಲ್ಲೇ ಬಿಡುಗಡೆಯಾಗುತ್ತದೆ. ಆದರೆ, ಅಪ್ಪು ಇನ್ನು ನಟಿಸಬೇಕಿದ್ದ ಸಿನಿಮಾಗಳನ್ನು ತೆರೆಯ ಮೇಲೆ ತರಲು ಆ ಸಿನಿಮಾಮಂದಿಯ ಆಸೆಯಾಗಿದೆ. ಜೊತೆಗೆ, ಪುನೀತ್ ಅಭಿಮಾನಿಗಳಿಗೂ ಅಪ್ಪು ನಟಿಸಲು ಒಪ್ಪಿಕೊಂಡ ಆ ಕೊನೆಯ ಸಿನಿಮಾಗಳನ್ನು ತೆರೆ ಮೇಲೆ ಕಾಣುವ ಹಂಬಲವಿದೆ.
ಹೀಗಾಗಿ, ನಿರ್ದೇಶಕ ಸಂತೋಷ್ ಆನಂದ್ರಾಮ್ ಅಪ್ಪುಗಾಗಿ ಬರೆದ ಕಥೆ ಮತ್ತು ಪುನೀತ್ ಅವರು ನಟಿಸಲು ಒಪ್ಪಿಕೊಂಡ ಆ ಕಥೆಯಲ್ಲಿ ರಾಘಣ್ಣನ ಪುತ್ರ ಯುವರಾಜ್ಕುಮಾರ್ ಅಪ್ಪು ಪಾತ್ರವನ್ನು ನಿರ್ವಹಿಸಲಿದ್ದಾರಂತೆ. ನಿರ್ದೇಶಕ ಸಂತೋಷ್ ಆನಂದ್ರಾಮ್ ಅವರೆ ನಟ ಯುವರಾಜ್ಕುಮಾರ್ರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹೀಗೆ, ಅಪ್ಪು ನಟಿಸಿ ಬೇಕಿದ್ದ ‘ದ್ವಿತ್ವ‘ ಚಿತ್ರ ಮತ್ತು ಇನ್ನೊಂದು ಚಿತ್ರದಲ್ಲಿಯೂ ಕೆಲವು ಬದಲಾವಣೆಗಳನ್ನು ಮಾಡಲಿದ್ದಾರಂತೆ ಸಿನಿಮಾತಂಡಗಳು. ಆದರೆ, ಈ ಎರಡು ಚಿತ್ರಗಳಲ್ಲಿ ನಾಯಕ ಯಾರಾಗಲಿದ್ದಾರೆ ಎಂಬುದು ಇನ್ನು ತಿಳಿಯಬೇಕಿದೆ. ಒಂದು ವೇಳೆ ಈ ಸಿನಿಮಾಗಳಲ್ಲಿ ಸಹ ನಟ ಯುವರಾಜ್ಕುಮಾರ್ ನಾಯಕ ನಟರಾದರೆ ಅಪ್ಪು ಸ್ಥಾನವನ್ನು ಯುವರಾಜ್ ಬಿಟ್ಟು ಬೇರೆ ಯಾರು ತುಂಬಲು ಸಾಧ್ಯವಿಲ್ಲ ಎಂಬಂತಾಗುತ್ತದೆ.