ಸುಳ್ಯ: ಕುಡಿದ ಮತ್ತಿನಲ್ಲಿ ಯುವಕನೊಬ್ಬ ತಲವಾರು ಹಿಡಿದು ಓಡಾಡಿ, ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದ ಘಟನೆ ಸುಳ್ಯ ತಾಲೂಕಿನ ಸುಣ್ಣಮೂಲೆ ಎಂಬಲ್ಲಿ ಬುಧವಾರ ನಡೆದಿದೆ. ಯುವಕನನ್ನು ಬಳಿಕ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಂದೀಪ್(30) ತಲವಾರು ಹಿಡಿದು ಓಡಾಡುವ ದೃಶ್ಯ ಮೊಬೈಲ್ನಲ್ಲಿ ಯಾರೋ ಸೆರೆ ಹಿಡಿದಿದ್ದರು. ಆ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು, ವೈರಲ್ ಕೂಡ ಆಗಿತ್ತು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿ ಆತನನ್ನು ವಶಕ್ಕೆ ಪಡೆದುಕೊಂಡರು.
ವಿಚಾರಣೆ ನಡೆಸಿದ ಪೊಲೀಸರಿಗೆ ತಲವಾರು ಝಳಪಿಸಿದ ಸಂದೀಪ್ ಮದ್ಯವ್ಯಸನಿ ಎಂದು ಗೊತ್ತಾಯಿತು. ವಿಪರೀತ ಕುಡಿಯುವ ಚಟ ಹೊಂದಿದ್ದ ಆತ ಕೆಲ ದಿನಗಳಿಂದ ಮದ್ಯಪಾನ ತ್ಯಜಿಸಿದ್ದ. ಬುಧವಾರ ಮತ್ತೆ ಕುಡಿದಿದ್ದರಿಂದ ಏಕಾಏಕಿ ಅಮಲೇರಿ ಈ ರೀತಿ ವರ್ತಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.