ಬೆಂಗಳೂರು: ಪ್ರವಾಸಕ್ಕೆ ಹೋಗಿದ್ದ ಸಮಯದಲ್ಲಿ ಪರಿಚಯವಾದ ಅಪ್ರಾಪ್ತೆಯನ್ನು ಪ್ರೀತಿಸುವುದಾಗಿ ನಂಬಿಸಿ ಮದುವೆಯಾದ ಟೆಂಪೋ ಟ್ರಾವೆಲರ್ ಚಾಲಕನಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ಎಫ್ಟಿಎಸ್ಸಿ 3ನೇ ಕೋರ್ಟ್ ತೀರ್ಪು ನೀಡಿದೆ.
ಆಂಧ್ರಪ್ರದೇಶ ಮೂಲದ ಮಂಜುನಾಥ ರೆಡ್ಡಿ ಶಿಕ್ಷೆಗೆ ಒಳಗಾದ ಅಪರಾಧಿ. ಈತನಿಗೆ ಸಾರಿಗೆ ಸೇವೆ ಒದಗಿಸಿದ ಅಪರಾಧದ ಮೇಲೆ ಪರಪ್ಪನ ಅಗ್ರಹಾರದ ಶರತ್ ಎಂಬಾತನಿಗೆ 3 ವರ್ಷ ಜೈಲು ಮತ್ತು 5 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
2017ರಲ್ಲಿ ಅಪರಾಧಿಯ ಟೆಂಪೋ ಟ್ರಾವೆಲ್ನಲ್ಲಿ ತಾಯಿ ಮತ್ತು ಮಗಳು ಪ್ರವಾಸಕ್ಕೆ ಹೋಗಿದ್ದರು. ಈ ವೇಳೆ ಮಗಳು (ಸಂತ್ರಸ್ತೆ) ಅನ್ನು ಮಂಜುನಾಥ್ ಪರಿಚಯ ಮಾಡಿಕೊಂಡು ಪ್ರೀತಿಸುವಂತೆ ಪೀಡಿಸುತ್ತಿದ್ದ. ಮೊಬೈಲ್ ನಂಬರ್ ಪಡೆದು ಆಕೆಯ ಕಾಲೇಜು ಬಳಿಗೆ ಹೋಗಿ ಭೇಟಿ ಮಾಡಿ ಮದುವೆ ಆಗುವಂತೆ ಒತ್ತಾಯಿಸಿದ್ದ. ಇಲ್ಲವಾದರೆ, ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದ. ಕೊನೆಗೆ ವಿಧಿ ಇಲ್ಲದೆ ಬಾಲಕಿ, ಮದುವೆಗೆ ಒಪ್ಪಿಕೊಂಡಾಗ 2017ರ ನ.8ರ ರಾತ್ರಿ ಅಪರಾಧಿ ಶರತ್ ಕಾರಿನಲ್ಲಿ ಬಾಲಕಿ ಮನೆ ಬಳಿಗೆ ಹೋದ ಮಂಜುನಾಥ್ ರೆಡ್ಡಿ ಆಕೆಯನ್ನು ಕರೆದುಕೊಂಡು ಹೋಗಿ ಶಿವಮೊಗ್ಗ ಜಿಲ್ಲೆ ತುರುವೆಕೆರೆ ತಾಲೂಕಿನ ಕಡೆಹಳ್ಳಿಯಲ್ಲಿ ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ ಹೂಡಿ ಬೆಳಗ್ಗೆ ದೇವಸ್ಥಾನದಲ್ಲಿ ಮದುವೆಯಾಗಿದ್ದ. ಆನಂತರ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ.
ಈ ಬಗ್ಗೆ ಬಾಲಕಿ ತಾಯಿ ನೀಡಿದ ದೂರಿನ ಮೇರೆಗೆ ಪರಪ್ಪನ ಅಗ್ರಹಾರ ಪೊಲೀಸರು ಪೋಕ್ಸೋ ಮತ್ತು ಬಾಲ್ಯ ವಿವಾಹ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡು ಇಬ್ಬರನ್ನು ಬಂಧಿಸಿದ್ದರು. ತನಿಖೆ ನಡೆಸಿ ಕೋರ್ಟ್ಗೆ ಆರೋಪಪಟ್ಟಿ ಸಲ್ಲಿಸಿದ್ದರು. ಸಂತ್ರಸ್ತೆ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಗೀತಾ ರಾಮಕೃಷ್ಣ ಗೊರವರ, ವಾದ ಮಂಡಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾ.ಇಷ್ರತ್ ಜಹಾನ್ ಅರ, ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.
ರಾತ್ರಿ ವೇಳೆ ಪ್ರಯಾಣಿಸುವವರಿಗೆ ರೈಲ್ವೆ ಇಲಾಖೆಯಿಂದ ಹೊಸ ರೂಲ್ಸ್! ಉಲ್ಲಂಘಿಸಿದ್ರೆ ಕಠಿಣ ಕ್ರಮದ ಎಚ್ಚರಿಕೆ
ಶಿವಾಜಿನಗರ ಕ್ಷೇತ್ರದಲ್ಲಿ ಯಾವುದೇ ಹೆಸರು ಕೈಬಿಟ್ಟಿಲ್ಲ: ಬಿಬಿಎಂಪಿ ಸ್ಪಷ್ಟನೆ
KGF ಬಗ್ಗೆ ಟಾಲಿವುಡ್ ನಿರ್ದೇಶಕನ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಪ್ರಶಾಂತ್ ನೀಲ್ ಹಳೇ ವಿಡಿಯೋ ವೈರಲ್!