ನವದೆಹಲಿ: ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣದಿಂದ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರನ್ನು ದೆಹಲಿ ಹೈಕೋರ್ಟ್ ಖುಲಾಸೆಗೊಳಿಸಿ ಬುಧವಾರ ಆದೇಶ ಹೊರಡಿಸಿದೆ. ಸುಮಾರು ಏಳು ವರ್ಷಗಳಿಂದ ಸಾಕಷ್ಟು ಸಂಚಲನ ಸೃಷ್ಟಿಸಿದ್ದ ಪ್ರಕರಣಕ್ಕೆ ಹೈಕೋರ್ಟ್ ಅಂತಿಮ ತೆರೆ ಎಳೆದಿದೆ.
ಸುನಂದ ಪುಷ್ಕರ್ (51) ಅವರು 2014, ಜನವರಿ 17ರಂದು ದೆಹಲಿಯ ಐಷಾರಾಮಿ ಹೋಟೆಲ್ನಲ್ಲಿ ರಾತ್ರಿ ನಿಗೂಢವಾಗಿ ಮೃತಪಟ್ಟಿದ್ದರು. ಅದೇ ವೇಳೆ ಶಶಿ ತರೂರ್ ಅವರು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು. ಆ ವೇಳೆ ಸಂಸದರ ಮನೆಯನ್ನು ನವೀಕರಣ ಮಾಡುತ್ತಿದ್ದರಿಂದ ಶಶಿ ತರೂರ್ ತಮ್ಮ ಕುಟುಂಬ ಸಮೇತ ಹೋಟೆಲ್ಗೆ ಸ್ಥಳಾಂತರಗೊಂಡಿದ್ದರು.
ಸುನಂದಾ ಪುಷ್ಕರ್ ಸಾವಿನ ಬೆನ್ನಲ್ಲೇ ಆತ್ಮಹತ್ಯೆಗೆ ಪ್ರಚೋದನೆ ಅಡಿಯಲ್ಲಿ ಶಶಿ ತರೂರ್ ಅವರ ವಿರುದ್ಧ ದೆಹಲಿ ಪೊಲೀಸರು ದೂರು ದಾಖಲಿಸಿದ್ದರು. ಶಶಿ ತರೂರ್ ಅವರನ್ನು ತನಿಖೆಗೆ ಒಳಪಡಿಸಬೇಕೆಂದು ದೆಹಲಿ ಪೊಲೀಸರು ಸಲ್ಲಿಸಿದ್ದ ಚಾರ್ಜ್ಶೀಟ್ ಅನ್ನು ಇಂದು ನಿರಾಕರಿಸಿದ ಹೈಕೋರ್ಟ್, ಅವರನ್ನು ಪ್ರಕರಣದಿಂದಲೇ ಕೈಬಿಟ್ಟಿದೆ. ಪ್ರಕರಣದ ಕುರಿತು ಬುಧವಾರ ನಡೆಸಿದ ವಿಡಿಯೊ ಕಾನ್ಫೆರೆನ್ಸ್ ನಲ್ಲಿ “ಆರೋಪಿ ಶಶಿ ತರೂರ್ ಅವರನ್ನು ಪ್ರಕರಣದಿಂದ ಕೈಬಿಡಲಾಗಿದೆ” ಎಂದು ಸ್ಪೆಷಲ್ ಜಡ್ಜ್ ಗೀತಾಂಜಲಿ ಗೋಯೆಲ್ ಆದೇಶಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಶಶಿ ತರೂರ್, “ಏಳೂವರೆ ವರ್ಷದಿಂದ ನಾನು ಹಿಂಸೆ ಅನುಭವಿಸಿದ್ದೇನೆ. ಹಾಗಾಗಿ ನಿಮ್ಮ ಈ ಆದೇಶವನ್ನು ಪ್ರಶಂಸಿಸುತ್ತೇನೆ” ಎಂದು ನ್ಯಾಯಾಲಯದಲ್ಲೇ ಧನ್ಯವಾದ ತಿಳಿಸಿ, ನಿಟ್ಟುಸಿರು ಬಿಟ್ಟಿದ್ದಾರೆ.
ಸುನಂದಾ ಪುಷ್ಕರ್ ಸಾವು ಪ್ರಕರಣದಲ್ಲಿ ಶಶಿ ತರೂರ್ ಅವರ ಕೈವಾಡ ಇದೆ ಎಂದು ವಿಶೇಷ ತನಿಖಾ ದಳ ಸಲ್ಲಿಸಿದ್ದ ದೋಷಾರೋಪಣಾ ಪಟ್ಟಿಯ ಆಧಾರದ ಮೇಲೆ ಈ ಹಿಂದೆ ನ್ಯಾಯಾಲಯ ಶಶಿ ತರೂರ್ ಅವರಿಗೆ ಜೂನ್ 5ರಂದು ಸಮನ್ಸ್ ಜಾರಿ ಮಾಡಿತ್ತು. ಜುಲೈ 5ರಂದು ದೆಹಲಿಯ ಪಟಿಯಾಲ ನ್ಯಾಯಾಲಯ ತರೂರ್ ಅವರಿಂದ ಒಂದು ಲಕ್ಷ ರೂಪಾಯಿ ಬಾಂಡ್ನ್ನು ಪಡೆದು ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿತ್ತು. (ಏಜೆನ್ಸೀಸ್)
VIDEO| ಪಾಕ್ ಟಿಕ್ಟಾಕರ್ ಬಟ್ಟೆ ಹರಿದು, ಎಳೆದಾಡಿದ ನೂರಾರು ಯುವಕರು! ಭಯಾನಕ ವಿಡಿಯೋ ವೈರಲ್
ನಮಗೆ ಸಹಾಯ ಮಾಡಲು ಪ್ರಧಾನಿ ಮೋದಿಯಿಂದ ಮಾತ್ರ ಸಾಧ್ಯ: ಭಾರತದ ಮೇಲೆ ಆಫ್ಘಾನ್ ಪ್ರಜೆಗಳ ಭರವಸೆ
‘ತೇಲುವ ಚಿನ್ನ ಖ್ಯಾತಿಯ’ ಅಂಬೇಗ್ರೀಸ್ ಮಾರಾಟಕ್ಕೆ ಯತ್ನ, ನಾಲ್ವರ ಬಂಧನ