ಯಲಬುರ್ಗಾ: ಕರ್ತವ್ಯನಿರತ ಪಪಂ ಪೌರ ನೌಕರರ ಮೇಲೆ ಹಲ್ಲೆ ನಡೆಸಿರುವ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕ ಜಿಲ್ಲಾಧಿಕಾರಿಗೆ ಬರೆದ ಮನವಿಯನ್ನು ಗ್ರೇಡ್ 2 ತಹಸೀಲ್ದಾರ್ ನಾಗಪ್ಪ ಸಜ್ಜನ್ಗೆ ಗುರುವಾರ ಸಲ್ಲಿಸಿತು.
ತಾಲೂಕು ಅಧ್ಯಕ್ಷ ವೈ.ಜಿ.ಪಾಟೀಲ್ ಮಾತನಾಡಿ, ಕರ್ತವ್ಯನಿರತ ಪಪಂ ನೌಕರರು ಹಾಗೂ ಸಿಬ್ಬಂದಿಯನ್ನು ಪಟ್ಟಣದ ಕೆಲವರು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಪೌರ ನೌಕರರಿಗೆ ರಕ್ಷಣೆ ಒದಗಿಸಬೇಕು. ಜಿಲ್ಲೆಯಲ್ಲಿ ನೌಕರರ ಮೇಲೆ ಸಾರ್ವಜನಿಕರಿಂದ ನಿರಂತರ ಹಲ್ಲೆ ನಡೆಯುತ್ತಿವೆ. ಇದರಿಂದ ನೌಕರರು ಮಾನಸಿಕ, ದೈಹಿಕ ನೋವು ಅನುಭವಿಸುವುದರ ಜತೆಗೆ ಒತ್ತಡ ಹಾಗೂ ಭಯದ ವಾತಾವರಣದಲ್ಲಿ ಕಾರ್ಯನಿರ್ವಹಿಸುವಂತಾಗಿದೆ. ಹೀಗಾಗಿ ನೌಕರರು ನೆಮ್ಮದಿಯಿಂದ ಕಾರ್ಯನಿರ್ವಹಿಸಲು ರಕ್ಷಣೆ ಒದಗಿಸಬೇಕೆಂದು ಒತ್ತಾಯಿಸಿದರು. ಪದಾಧಿಕಾರಿಗಳಾದ ಶ್ರೀನಿವಾಸ, ಮಂಜುನಾಥ ಮೇಟಿ, ಉಮಾ ಹಿರೇಮಠ, ದೇವಪ್ಪ ಮುಗಳಿ ಇತರರು ಇದ್ದರು.