ಯಲಬುರ್ಗಾ: ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಸರ್ಕಾರ ವಿಳಂಬ ಅನುಸರಿಸುತ್ತಿದೆ ಎಂದು ಆರೋಪಿಸಿ ತಾಲೂಕು ಪಂಚಮಸಾಲಿ ಸಮುದಾಯದಿಂದ ಸೋಮವಾರ ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸಮುದಾಯದ ತಾಲೂಕು ಅಧ್ಯಕ್ಷ ಕೆ.ಜಿ.ಪಲ್ಲೇದ, ಕಾರ್ಯದರ್ಶಿ ರಾಜಶೇಖರ ನಿಂಗೋಜಿ, ಮುಖಂಡ ಸಿ.ಎಚ್.ಪಾಟೀಲ್ ಮಾತನಾಡಿ, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಿಕೊಡುವಂತೆ ಈ ಹಿಂದೆ ಸಾಕಷ್ಟು ಬಾರಿ ಹೋರಾಟ ಮಾಡಿ ಮನವಿ ಸಲ್ಲಿಸಿದರೂ ಸರ್ಕಾರ ಸ್ಪಂದಿಸಿಲ್ಲ. ಕೂಡಲಸಂಗಮ ಶ್ರೀಗಳ ನೇತೃತ್ವದಲ್ಲಿ ಬೆಂಗಳೂರುವರೆಗೆ ಪಾದಯಾತ್ರೆ ಕೈಗೊಂಡಾಗ ಸರ್ಕಾರ ಮೀಸಲಾತಿ ಕಲ್ಪಿಸುವ ಭರವಸೆ ನೀಡಿತ್ತು. ಹಲವು ದಿನಗಳು ಕಳೆದರೂ ಈವರೆಗೆ ನ್ಯಾಯ ಒದಗಿಸಿ ಕೊಡುವ ಪ್ರಯತ್ನ ಮಾಡುತ್ತಿಲ್ಲ. ಮೀಸಲು ನೀಡಲು ಮತ್ತಷ್ಟು ವಿಳಂಬ ಮಾಡಿದರೆ ಹೋರಾಟ ತೀವ್ರಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಬಳಿಕ ತಹಸಿಲ್ ಕಚೇರಿಗೆ ತೆರಳಿ ಗ್ರೇಡ್2 ತಹಸೀಲ್ದಾರ್ ನಾಗಪ್ಪ ಸಜ್ಜನ್ಗೆ ಮನವಿ ಸಲ್ಲಿಸಲಾಯಿತು.
ಪ್ರಮುಖರಾದ ಬಸಲಿಂಗಪ್ಪ ಭೂತೆ, ಶೇಖರಗೌಡ ಉಳ್ಳಾಗಡ್ಡಿ, ಸುರೇಶಗೌಡ ಶಿವನಗೌಡ್ರ, ಶರಣಪ್ಪ ಪಾಟೀಲ್, ಶರಣಪ್ಪ ರಾಂಪುರ, ಅಮರೇಶ ಹುಬ್ಬಳ್ಳಿ, ಶರಣಪ್ಪ ಕೊಟಗಿ, ನೀಲನಗೌಡ ತಳವಗೇರಿ, ರಾಜಶೇಖರ ಶ್ಯಾಗೋಟಿ, ಆನಂದ ಉಳ್ಳಾಗಡ್ಡಿ, ಶರಣಪ್ಪ ಕೊಪ್ಪಳ, ಶಿವನಗೌಡ ನಾಗನಗೌಡ್ರ, ಮಹೇಶ ಭೂತೆ, ಶರಣಪ್ಪ ಗುದ್ದಲದ, ಬಸವರಾಜ ಚಿತ್ತರಗಿ ಇತರರಿದ್ದರು.