More

    ಕಮ್ಮಿ ವೇತನ ಬಿಟ್ಟು, ಸ್ವಂತ ಉದ್ಯಮ ಸ್ಥಾಪಿಸಿ

    ಕಲಬುರಗಿ: ಸಾಮಾಜಿಕ ಕಾರ್ಯದ ವಿದ್ಯಾರ್ಥಿಗಳು ಕಡಿಮೆ ಸಂಬಳದ ಉದ್ಯೋಗ ಹುಡುಕುವ ಬದಲು, ತಮ್ಮದೇ ಆದ ಸಾಮಾಜಿಕ ಉದ್ಯಮ ಪ್ರಾರಂಭಿಸಬಹುದು ಎಂದು ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯದ ಪುಣೆ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಬಿ.ಟಿ.ಲಾವಣಿ ಹೇಳಿದರು.

    ಕಡಗಂಚಿ ಬಳಿಯ ಕೇಂದ್ರೀಯ ವಿಶ್ವವಿದ್ಯಾಲಯದದಲ್ಲಿ ಸಮಾಜಕಾರ್ಯ ವಿಭಾಗದಿಂದ ಬುಧವಾರ ಆಯೋಜಿಸಿದ್ದ ವಿಶ್ವ ಸಮಾಜಕಾರ್ಯ ದಿನಾಚರಣೆಯಲ್ಲಿ ಮಾತನಾಡಿ, ಪ್ರತಿ ಸಮಾಜ ಸೇವಕರು ಸಾಮಾಜಿಕ ಉದ್ಯಮ ನಡೆಸುವ ಕೌಶಲ ಹೊಂದಿದ್ದಾರೆ. ಭಾರತದಲ್ಲಿ ಸಾಕಷ್ಟು ಉದ್ಯಮಗಳ ಅಗತ್ಯವಿದೆ. ಕೃಷಿಯಲ್ಲಿನ ಉದ್ಯಮಶೀಲತೆಯ ಅವಕಾಶ ಬಳಸಿಕೊಂಡು ಉದ್ಯಮಿಗಳಾಗಬಹುದು ಎಂದರು.

    ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರು ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಸಮಾಜ ಸೇವಕರಾದ ನೀವು ಸಾಮಾಜಿಕ ಚಟುವಟಿಕೆಗಳನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿದ್ದೀರಿ. ತಾವು ಜನರ ಯೋಗಕ್ಷೇಮದಲ್ಲಿ ಪ್ರಮುಖ ಪಾತ್ರ ವಹಿಸುತ್ತೀರಿ. ಮಹಿಳೆಯರು, ಮಕ್ಕಳು ಮತ್ತು ರೈತರಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

    ಸಾಮಾಜಿಕ ವಿಜ್ಞಾನ ನಿಕಾಯದ ಡೀನ್ ಪ್ರೊ.ಚನ್ನವೀರ ಆರ್.ಎಂ., ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಪ್ರೊ.ಪವಿತ್ರಾ ಆಲೂರ್ ಮಾತನಾಡಿದರು.
    ಪ್ರಗತಿಪರ ಸಾವಯವ ಕೃಷಿಕ ಹಣಮಂತ ಬೆಳಗುಂಪಿ, ಕಲಬುರಗಿಯ ಮಾರ್ಗದರ್ಶಿ ಸ್ವಯಂ ಸೇವಾ ಸಂಸ್ಥೆಯ ನಿರ್ದೇಶಕ ಆನಂದರಾಜ್ ಅವರನ್ನು ಸನ್ಮಾನಿಸಲಾಯಿತು. ಸಂಯೋಜಕ ಡಾ.ಶಿವಮೂರ್ತಿ ಸ್ವಾಗತಿಸಿದರು. ಬಿನ್ಷಾ ನಿರೂಪಣೆ ಮಾಡಿದರು. ಎಲ್ದೋಸ್ ವಂದಿಸಿದರು.

    ವಿದ್ಯಾರ್ಥಿಗಳು ಸುಸ್ಥಿರ ಸಿಯುಕೆ, ಸಾಮಾಜಿಕ ನ್ಯಾಯ ಮತ್ತು ಶಿಕ್ಷಣದ ಮೌಲ್ಯ ಪ್ರದರ್ಶಿಸುವ ಮಾದರಿ, ಸಮಾಜ ಸುಧಾರಕರು ಮತ್ತು ಕಾರ್ಯಕರ್ತರು, ಮಾದರಿ ಶಾಲೆ, ಕ್ಷೇಮ ಕೇಂದ್ರ, ಮಕ್ಕಳ ಮಾರ್ಗದರ್ಶನ ಕೇಂದ್ರ, ಮಾದರಿ ಕಾರ್ಖಾನೆಯಂತಹ ವಿವಿಧ ಸಾಮಾಜಿಕ ಕಾರ್ಯ ಮಾದರಿಗಳನ್ನು ಸಿದ್ಧಪಡಿಸಿ ಪ್ರದರ್ಶಿಸಿದರು. ಸುತ್ತಮುತ್ತಲಿನ ಗ್ರಾಮಗಳ ಜನರು, ಶಾಲಾ ಮಕ್ಕಳು, ಚಿಕ್ಕ ಮಕ್ಕಳು ವಸ್ತು ಪ್ರದರ್ಶನ ವೀಕ್ಷಿಸಿದರು. ಸ್ಥಳೀಯ ಉದ್ಯಮಿಗಳು ಕ್ಯಾಂಪಸ್‌ನಲ್ಲಿ ಅಂಗಡಿ ಹಾಕಿದ್ದರು. ಉತ್ಪಾದಕರು ಮತ್ತು ರೈತರು ತಮ್ಮ ಸರಕುಗಳನ್ನು ನೇರವಾಗಿ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts