ನವದೆಹಲಿ: ಚೀನಾದಲ್ಲಿ ಹುಟ್ಟಿದ ಕರೊನಾ ವೈರಸ್ ಇಡೀ ಜಗತನ್ನು ಕಾಡಿರುವುದರಿಂದ ಇದೀಗ ಚೀನಾದೊಂದಿಗೆ ವ್ಯವಹಾರ ನಡೆಸಲು ವಿಶ್ವವು ಬಯಸುತ್ತಿಲ್ಲ. ಹೀಗಾಗಿ ಇದು ಭಾರತಕ್ಕೆ ವರವಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ತಿಳಿಸಿದರು.
ಕರೊನಾ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ಸಣ್ಣ, ಸತಿಸಣ್ಣ ಹಾಗೂ ಮಧ್ಯಮ ಉದ್ಯಮಗಳ ಚೇತರಿಕೆಗೆ ಬೆಂಬಲ ಕುರಿತು ಸರ್ಕಾರದ ವಿಸ್ತೃತ ಚರ್ಚೆಯ ಬಳಿಕ ಮಾಧ್ಯಮ ಸಂದರ್ಶನವೊಂದರಲ್ಲಿ ಗಡ್ಕರಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿರುವ ನೂತನ ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್ಡಿಐ)ಯನ್ನು ವಿರೋಧಿಸಿದ ಚೀನಾ, ಇದು ವಿಶ್ವ ವ್ಯಾಪಾರ ಸಂಸ್ಥೆಯ(ಡಬ್ಲ್ಯುಟಿಒ) ತಾರತಮ್ಯ ಮಾಡಬಾರದೆಂಬ ತತ್ವಗಳಿಗೆ ಉಲ್ಲಂಘನೆಯಾಗಿದೆ. ಮುಕ್ತ ಮತ್ತು ಉತ್ತಮ ವ್ಯಾಪಾರಕ್ಕೆ ಅವರು ವಿರುದ್ಧವಾಗಿದ್ದಾರೆ ಎಂದು ಚೀನಾ ಭಾರತದ ವಿರುದ್ಧ ಕಿಡಿಕಾರಿದ ಬೆನ್ನಲ್ಲೇ ನಿತಿನ್ ಗಡ್ಕರಿ ಚೀನಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಶ್ವದ ಪ್ರತಿಯೊಂದು ದೇಶವು ಇಂದು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಆದರೆ, ಚೀನಾ ಆರ್ಥಿಕತೆಯಲ್ಲಿ ಬಲಿಷ್ಠವಾಗಿದ್ದರೂ ಸಹ ಇಂದು ಎಲ್ಲ ದೇಶಗಳು ಚೀನಾದೊಟ್ಟಿಗೆ ವ್ಯಾಪಾರ ನಡೆಸಲು ಬಯಸುತ್ತಿಲ್ಲ. ಇದು ನಮಗೆ ವರದಾನವಾಗಿದೆ. ನಮಗೆ ಇದೊಂದು ಸುವರ್ಣಾವಕಾಶ ಎಂದು ತಿಳಿಸಿದರು.
2025ರ ವೇಳೆಗೆ ಭಾರತದ ಆರ್ಥಿಕತೆಯನ್ನು ಐದು ಟ್ರಿಲಿಯನ್ ಡಾಲರ್ ಮಾಡಬೇಕೆಂಬ ಪ್ರಧಾನಿ ಮೋದಿ ಅವರ ಮಹಾತ್ವಾಕಾಂಕ್ಷೆ ಈಡೇರಲು ಈ ಅವಕಾಶ ನೆರವಾಗಬಹುದು. ಮೋದಿ ಅವರ ದೃಷ್ಟಿಕೋನವನ್ನು ಪೂರೈಸಲು ಹೊಸ ತಂತ್ರಜ್ಞಾನವನ್ನು ಹೂಡಿಕೆಗಳಾಗಿ ಪರಿವರ್ತಿಸಲು ನಾವು ಜಂಟಿ ಕಾರ್ಯದರ್ಶಿಯನ್ನು ನಿಯೋಜಿಸುತ್ತೇವೆ ಎಂದರು.
ಚೀನಾದ ವುಹಾನ್ ನಗರದಲ್ಲಿ ಕರೊನಾ ವೈರಸ್ ಕಳೆದ ಡಿಸೆಂಬರ್ನಲ್ಲಿ ಸ್ಪೋಟಗೊಂಡಿತು. ಇಂದು ಜಾಗತಿಕವಾಗಿ ಹರಡಿರುವ ಕಿಲ್ಲರ್ ಕರೊನಾ ತನ್ನ ಮೃತ್ಯಕೂಪಕ್ಕೆ 2 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿಪಡೆದುಕೊಂಡಿದೆ. ಹೀಗಾಗಿ ಚೀನಾ ವಿರುದ್ಧ ವಿಶ್ವಮಟ್ಟದಲ್ಲಿ ಸಾಕಷ್ಟು ಆರೋಪಗಳು ಕೇಳಿ ಬರುತ್ತಿವೆ. (ಏಜೆನ್ಸೀಸ್)
ಕಿಮ್ ಜಾಂಗ್ ಉನ್ ಆರೋಗ್ಯ ನಿಗೂಢ, ಉತ್ತರ ಕೊರಿಯಾಕ್ಕೆ ಚೀನಿ ವೈದ್ಯರ ತಂಡ