ಹಿರಿಯೂರು: ನಗರದಲ್ಲಿ ಹಾದು ಹೋಗಿರುವ ವೇದಾವತಿ ನದಿ-ವಾಣಿ ವಿಲಾಸ ಸಾಗರ ಎಡ-ಬಲ ದಂಡೆ ನಾಲೆಗೆ ಕೊಳಚೆ ನೀರು ಹರಿಬಿಡುತ್ತಿರುವುದರಿಂದ ನದಿ ಕಲುಷಿತಗೊಂಡಿದೆ.
ಇದಕ್ಕೆ ಕಡಿವಾಣ ಹಾಕಲು ಸ್ಥಳೀಯ ಜನಪ್ರತಿನಿಧಿಗಳ ವಿಫಲವಾಗಿದ್ದು, ಪರಿಣಾಮ ನಾಲೆಗಳು ರೋಗ ಹರಡುವ ತಾಣವಾಗಿ ಮಾರ್ಪಾಡು ಆಗಿದೆ.
ನಗರದ ವಿವಿಧ ಬಡಾವಣೆಗಳ ಒಳ ಚರಂಡಿಯ ಕೊಳಚೆ ನೀರನ್ನು ನದಿ-ನಾಲೆಗಳಿಗೆ ಬಿಡುವುದರಿಂದ ನೀರು ಕಲುಷಿತಗೊಂಡು ಸೊಳ್ಳೆ, ಹಂದಿಗಳ ಹಾವಳಿ, ದುರ್ನಾತದಿಂದ ಸ್ಥಳೀಯ ನಿವಾಸಿಗಳು ನರಕಯಾತನೆ ಅನುಭವಿಸುವಂತಾಗಿದೆ.
ವೇದಾವತಿ ಕಲುಷಿತ: ಬಯಲುಸೀಮೆ ಜನರ ಪಾಲಿಗೆ ಜೀವ ಜಲವಾಗಿರುವ ವೇದಾವತಿ ನದಿ ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ. ತ್ಯಾಜ್ಯ, ಪ್ಲಾಸ್ಟಿಕ್, ಶೌಚಗೃಹದ ನೀರು ನೀರು ನೇರ ನದಿ ಸೇರುತ್ತಿದೆ.
ಇದಕ್ಕೆ ಮುಖ್ಯ ಕಾರಣ ನಗರದಲ್ಲಿ ಯುಜಿಡಿ ಕಾಮಗಾರಿಗೆ ಚಾಲನೆ ಸಿಕ್ಕಿಲ್ಲದಿರುವುದು.
ತೇರುಮಲ್ಲೇಶ್ವರ ಸ್ವಾಮಿ ಜಾತ್ರೋತ್ಸವದ ಸಂದರ್ಭದಲ್ಲಿ ವೇದಾವತಿ ನದಿಯಲ್ಲಿ ಶಿವಧನಸನ್ನು ಗಂಗಾಸ್ನಾನ, ದೇವರ ಪಾದಗಳ ಗಂಗಾಪೂಜೆ ನೆರವೇರಿಸಲಾಗುತ್ತದೆ.
ಆದರೆ, ತ್ಯಾಜ್ಯ- ಕೊಳಚೆ ನೀರಿನಿಂದ ಪವಿತ್ರ ವೇದಾವತಿ ನದಿ ಇಂದು ಕಲುಷಿತಗೊಂಡಿದೆ.
ನದಿ ಸ್ವಚ್ಛತೆಗೆ ಇಚ್ಛಾಶಕ್ತಿ ಕೊರತೆ: ಪಶ್ಚಿಮಘಟದಲ್ಲಿ ಉಗಮವಾಗುವ ವೇದಾವತಿ ನದಿ ಬಯಲುಸೀಮೆ ಮೂಲಕ ಆಂಧ್ರಪ್ರದೇಶ ಸೇರುತ್ತದೆ.
ನದಿ ಪಾತ್ರದಲ್ಲಿನ ಹಳ್ಳಿಗಳು, ನಗರ ಪ್ರದೇಶದ ತ್ಯಾಜ್ಯ, ಕೊಳಚೆ ನೀರನ್ನು ನದಿಗೆ ಹರಿಬಿಡುವುದು ಹೆಚ್ಚು ಅಪಾಯಕಾರಿ ಆಗಿದೆ.
ರೋಗ ಹರಡುವ ತಾಣ: ವಿವಿ ಸಾಗರ ಎಡ-ಬಲ ದಂಡೆ ನಾಲೆಗಳಲ್ಲಿ ಕೊಳಚೆ ನೀರು ನಿಲ್ಲುವುದರಿಂದ ರೋಗ ಹರಡುವ-ಸೊಳ್ಳೆ ಉತ್ಪತ್ತಿಯ ತಾಣವಾಗಿದ್ದು, ಪರಿಣಾಮ ಡೆಂಘೆ ಸೇರಿ ವಿವಿಧ ಕಾಲರಾ ಹೆಚ್ಚುವ ಭೀತಿ ಜನರಲ್ಲಿದೆ.
ಹಿರಿಯೂರಿನಲ್ಲಿ ಸ್ವಚ್ಛತೆ, ಜನರ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಿದ್ದು, ಚರಂಡಿಗಳ ಸ್ವಚ್ಛತೆ, ನೀರು ನಿಲ್ಲುವ ಸ್ಥಳದಲ್ಲಿ ಸೊಳ್ಳೆ ಉತ್ಪತ್ತಿ ತಡೆಯಲು ಕ್ರಮ ವಹಿಸಲಾಗಿದೆ. ನೀರಾವರಿ ಇಲಾಖೆ ಸಹಕಾರದೊಂದಿಗೆ ಎಡ-ಬಲ ದಂಡೆ ನಾಲೆಗಳ ಸ್ಚಚ್ಛತೆಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಮುಖ್ಯವಾಗಿ ಸ್ವಚ್ಛತಾ ಕಾರ್ಯಕ್ಕೆ ಜನರ ಸಹಕಾರ ಅಗತ್ಯ.
ಎಚ್.ಮಹಂತೇಶ್, ಪೌರಾಯುಕ್ತ, ನಗರಸಭೆ
ಜಲಮೂಲಗಳ ಮಾಲಿನ್ಯಕ್ಕೆ ಸ್ಥಳೀಯ ಆಡಳಿತ ಹೊಣೆಯಾಗಿದ್ದು, ಜಲ ಕಾಯ್ದೆ 47ರ ಅನ್ವಯ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ. ನಾಲೆ ಸ್ವಚ್ಛತೆ, ಒಳ ಚರಂಡಿ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು.
ಎಲ್.ನಾರಾಯಣಾಚಾರ್, ಅಧ್ಯಕ್ಷರು, ರಾಜ್ಯ ನಿವೃತ್ತ ಪೌರಕಾರ್ಮಿಕ ಸಂಘ