ಶೃಂಗೇರಿ: ಮಲೆನಾಡಿನ ಜೀವಸೆಲೆಯಾದ ತುಂಗಾ ನದಿಯ ನೀರಿನ ಹರಿವಿನ ಪ್ರಮಾಣ ದಿನೇ ದಿನೆ ಕುಸಿಯುತ್ತಿದೆ.
ಪಶ್ಚಿಮ ಘಟ್ಟದ ಪರ್ವತ ಸಾಲುಗಳಲ್ಲಿ ಹುಟ್ಟುವ ತುಂಗಾ ನದಿ ಅಗಾಧ ಪ್ರಮಾಣದ ಮುಂಗಾರು ಮಳೆಯಿಂದ ಮಳೆಗಾಲದಲ್ಲಿ ಮೈತುಂಬಿ ಹರಿಯುತ್ತದೆ. ಬೇಸಿಗೆಯಲ್ಲಿ ಬೆಟ್ಟಗುಡ್ಡಗಳ ಬಸಿಯುವ ನೀರಿನಿಂದ ಸದಾ ಹರಿಯುತ್ತಲೇ ಇರುತ್ತದೆ. ಅರಬ್ಬಿ ಸಮುದ್ರದಿಂದ ಎದ್ದು ಬರುವ ಮೋಡಗಳನ್ನು ತಡೆದು ಈ ನದಿ ಮೂಲಗಳಲ್ಲಿರುವ ಪರ್ವತ ಪ್ರದೇಶದಲ್ಲಿ ವಾರ್ಷಿಕ 400 ಇಂಚಿನಷ್ಟು ಮಳೆಯಾದ ದಾಖಲೆಗಳಿವೆ. ಆದರೆ ಪ್ರಸ್ತುತ ಮಳೆಯ ಕೊರತೆಯಿಂದ ತುಂಗಾ ನದಿಯ ನೀರಿನ ಹರಿವು ಗಣನೀಯ ಕಡಿಮೆಯಾಗುತ್ತಿದೆ.
ತಾಲೂಕಿನ ಕೆರೆಗಳ ಸ್ಥಿತಿ-ಗತಿ: ಪ್ರಮುಖ ಜಲ ಮೂಲಗಳಾದ ಕೆರೆಗಳ ಅಭಿವೃದ್ಧಿಯಲ್ಲಿ ತಾಲೂಕು ಹಿಂದುಳಿದೆ. ಕೆರೆಗಳಲ್ಲಿ ಹೂಳು ತುಂಬಿಕೊಂಡು ನೀರಿನ ಸಂಗ್ರಹ ಸಾಮರ್ಥ್ಯ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಮಳೆಗಾಲದಲ್ಲಿ ತುಂಗಾ ನದಿ, ಅತಿ ದೊಡ್ಡ ಕೆರೆಯಾದ ನಲ್ಲೂರು ಕೆರೆ 14 ಎಕರೆಯಷ್ಟು ವಿಶಾಲವಾಗಿದೆ. ಶೃಂಗೇರಿ-ಆಗುಂಬೆ ನಡುವಿನ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಕೆರೆ ಪ್ರಾಕೃತಿಕ ಸೊಬಗನ್ನು ಹೊಂದಿದ್ದು ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದಲು ಜನಪ್ರತಿನಿಧಿಗಳ ಹಾಗೂ ಅಧಿಕಾರಿ ವರ್ಗಕ್ಕೆ ಇಚ್ಛಾಶಕ್ತಿ ಅಗತ್ಯವಿದೆ. ಮೆಣಸೆ ಗ್ರಾಪಂ ವ್ಯಾಪ್ತಿಯ ಕಿರಗೋಡು, ಕಕ್ಕೋಡು ಕೆರೆ, ಧರೇಕೊಪ್ಪದ ಮುಳಯ್ಯನ ಕೆರೆ, ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ -169ರ ಭಕ್ತಂಪುರ ಕೆರೆಗಳನ್ನು ಅಭಿವೃದ್ಧಿ ಪಡಿಸಿದರೆ ನೀರಿನ ಕೊರತೆ ನೀಗಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯ.