ಕೊಪ್ಪಳ: ಉದ್ಯೋಗ ಚೀಟಿಯಲ್ಲಿ ಕೂಲಿ ಕೆಲಸ ನಿರ್ವಹಣೆ, ಕೂಲಿ ಪಾವತಿ ವಿವರ ಕಡ್ಡಾಯವಾಗಿ ನಮೂದಿಸಿ. ಇದರಿಂದ ಒಂದು ಕುಟುಂಬಕ್ಕೆ ವರ್ಷದಲ್ಲಿ ಎಷ್ಟು ದಿನ ಕೆಲಸ ಹಾಗೂ ಕೂಲಿ ನೀಡಲಾಗಿದೆ ಎಂಬ ಮಾಹಿತಿ ಸಿಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಆಯುಕ್ತ ಪವನ ಕುಮಾರ್ ಮಾಲಪಾಟಿ ಸೂಚಿಸಿದರು.
ನರೇಗಾದಡಿ ಅನುಷ್ಠಾನಗೊಂಡ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿ ಶನಿವಾರ ಮಾತನಾಡಿದರು.
ಮೆಟ್ಗಳು ಕೂಲಿಕಾರರಿಗೆ ಅಳತೆ ಕುರಿತು ಸರಿಯಾಗಿ ಮಾಹಿತಿ ನೀಡಿ. ಇದರಿಂದ ಅವರಿಗೂ ಅಳತೆ ಮಾಹಿತಿ ಅರಿವಾಗಲಿದೆ. ಬೇಸಿಗೆ ಕಾರಣ ನಿರಂತರವಾಗಿ ಕೂಲಿಕಾರರಿಗೆ ಕೆಲಸ ನೀಡಬಹುದು. ಈ ಬಗ್ಗೆ ಗ್ರಾಪಂ ಸರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಿ. ಕಾಯಕ ಬಂಧುಗಳು ನಿರಂತರವಾಗಿ ಕಾಲ ಕಾಲಕ್ಕೆ ಮಾಹಿತಿ ನೀಡಿ. ನೆಡುತೋಪುಗಳ ರಕ್ಷಣೆ ಮುಖ್ಯ. ಹೆಚ್ಚು ನೆಡುತೋಪು ಕಾಮಗಾರಿಗಳನ್ನು ಅನುಷ್ಠಾನ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಹೂವಿನಾಳ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ತೆರಳಿ ಕೂಲಿಕಾರರ ಕೆಲಸ ವೀಸಿದರು. ಕೂಲಿಕಾರರಿಗೆ ವರ್ಷದಲ್ಲಿ ಎಷ್ಟು ದಿನ ಕೆಲಸ ನೀಡಲಾಗಿದೆ ಎಂಬ ಬಗ್ಗೆ ಅವರಿಂದಲೇ ಮಾಹಿತಿ ಪಡೆದರು. ನಾಲಾ ಹೂಳೆತ್ತುವ ಕಾಮಗಾರಿ ಅಂದಾಜು ಪತ್ರಿಕೆ ಪರಿಶೀಲಿಸಿದರು. ಬಿಸರಳ್ಳಿ&ಬಿಕನಳ್ಳಿ ರಸ್ತೆ ಬದಿ ನೆಡು ತೋಪು ಕಾಮಗಾರಿ ವೀಸಿದರು.
ಬಿಕನಳ್ಳಿ ರೈತ ಬಸವರೆಡ್ಡಿ ನರೇಗಾದಡಿ ಬಾಳೆ ತೋಟ ನಿರ್ಮಿಸಿಕೊಂಡಿದ್ದು, ಕೂಲಿ, ಸಾಮಗ್ರಿ ಮೊತ್ತ ಬಂದ ಬಗ್ಗೆ ಅವರಿಂದಲೇ ಕೇಳಿ ತಿಳಿದುಕೊಂಡರು. 5 ಲಕ್ಷ ರೂ.ವರೆಗೆ ವೈಯಕ್ತಿಕ ಕಾಮಗಾರಿ ಪಡೆಯಲು ಅವಕಾಶವಿದ್ದು, ತೋಟ ನಿರ್ಮಾಣಕ್ಕೆ ರೈತರಿಗೆ ಪ್ರೇರೇಪಿಸಲು ಸೂಚಿಸಿದರು.
ಕೋಳೂರು, ಕಾಟ್ರಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2023&24ನೇ ಸಾಲಿನಲ್ಲಿ ನಿರ್ಮಿಸಿದ ಶೌಚಗೃಹ, ಅಡುಗೆ ಕೋಣೆ ಹಾಗೂ ಇತರ ಶಾಲಾಭಿವೃದ್ಧಿ ಕಾಮಗಾರಿಗಳು ಹಾಗೂ ಅವುಗಳ ಕಡತಪರಿಶೀಲಿಸಿದರು. ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಆಯುಕ್ತಾಲಯದ ಜಂಟಿ ನಿರ್ದೇಶಕ ಶ್ರೀಶೈಲ ದಿಡ್ಡಿಮನಿ, ಜಿಪಂ ಉಪ ಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ, ತೋಟಗಾರಿಕೆ ಉಪನಿರ್ದೇಶಕ ಕೃಷ್ಣಾ ಉಕ್ಕುಂದ, ಅಭಿಯಂತರ ಯಶವಂತ, ತಾಪಂ ಇಒ ದುಂಡಪ್ಪ ತುರಾದಿ, ಸಹಾಯಕ ನಿರ್ದೇಶಕರಾದ ಯಂಕಪ್ಪ, ಶಂಕ್ರಪ್ಪ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಗುರನಗೌಡ, ಎಡಿಪಿಸಿ ಮಹಾಂತಸ್ವಾಮಿ, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ಎಂಐಎಸ್ ಸಂಯೋಜಕ ಮೈನುದ್ದೀನ್ ಇತರರಿದ್ದರು.