ನವಿ ಮುಂಬೈ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ತಿದ್ದಿದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ, ಮತೀಯ ಗಲಭೆ ಸೃಷ್ಟಿಸಲು ಯತ್ನಿಸಿದ ಆರೋಪದಲ್ಲಿ ಮುಂಬೈ ಪೊಲೀಸರು ಒಬ್ಬ ಮಹಿಳೆಯನ್ನು ಬಂಧಿಸಿದ್ದಾರೆ. ಗುರುವಾರ ಬಂಧಿಸಲ್ಪಟ್ಟಿದ್ದ ಈ ಮಹಿಳೆಗೆ ಸ್ಥಳೀಯ ನ್ಯಾಯಾಲಯ ಗುರುವಾರವೇ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.
ಈ ವಿಷಯವನ್ನು ಖಚಿತಪಡಿಸಿರುವ ಮುಂಬೈ ಪೊಲೀಸ್ ಕ್ರೈಂ ಬ್ರ್ಯಾಂಚ್ನ ಡಿಸಿಪಿ ರಶ್ಮಿ ಕಾರಾಂಡಿಕರ್, 38 ವರ್ಷದ ಮಹಿಳೆ ನವಿ ಮುಂಬೈನ ನಿವಾಸಿಯಾಗಿದ್ದಾರೆ. ಶಿವಸೇನೆಯ ಕಾನೂನು ಸಲಹೆಗಾರ ಧರ್ಮೇಂದ್ರ ಮಿಶ್ರಾ ಅವರ ಸಲಹೆ ಮೇರೆಗೆ ಬಂಧಿಸಲಾಗಿತ್ತು. ಸ್ಥಳೀಯ ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ದೇವಸ್ಥಾನದ ನಿಧಿ ದೋಚಲು ಬಂದವ ಸ್ಥಳದಲ್ಲೇ ದುರ್ಮರಣ, ಮೂವರ ಸ್ಥಿತಿ ಗಂಭೀರ
ಮಹಿಳೆಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಪ್ರಕಾರ, ಎರಡು ಗುಂಪುಗಳ ನಡುವೆ ದ್ವೇಷ ಬಿತ್ತಲು ಯತ್ನ, ಸಾಮಾಜಿಕ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ತರಲು ಯತ್ನ ಮತ್ತು ಹೆಸರಿಗೆ ಕಳಂಕ ತರಲು ಯತ್ನಿಸಿದ ಆರೋಪಗಳನ್ನು ಹೊರಿಸಲಾಗಿದೆ ಎಂದು ಹೇಳಿದ್ದಾರೆ.
ಪೊಲೀಸರಿಗೆ ದೂರು ಕೊಟ್ಟಿದ್ದ ಧರ್ಮೇಂದ್ರ ಮಿಶ್ರಾ, ಜು.25 ಮತ್ತು 28ರಂದು ಸರಣಿ ಟ್ವೀಟ್ ಮೂಲಕ ಮಹಿಳೆಯು ಸಿಂ ಉದ್ಧವ್ ಠಾಕ್ರೆ ಹಾಗೂ ಅವರ ಪುತ್ರ ಹಾಗೂ ಸಚಿವರೂ ಆದ ಆದಿತ್ಯ ಠಾಕ್ರೆ ಅವರನ್ನು ನಿಂದಿಸಿದ್ದರು ಎಂದು ಹೇಳಿದ್ದರು.
ಈ ಮಹಿಳೆಯ ಟ್ವಿಟ್ಟರ್ ಪ್ರೊಫೈಲ್ ಪ್ರಕಾರ ಈ ಮಹಿಳೆಯು ಭಾರತ್ ನೀತಿ ಎಂಬ ಬಿಜೆಪಿಯ ಐಟಿ ಮೋರ್ಚಾ ವಿಭಾಗದ ಸದಸ್ಯೆಯಾಗಿದ್ದಾರೆ. ಇಂಥ ಆಕ್ಷೇಪಾರ್ಹ ಪೋಸ್ಟ್ ಮಾಡುವ ಮೂಲಕ ಸಿಎಂ ಹುದ್ದೆಗೆ ಕಳಂಕ ತರಲು ಆ ಮಹಿಳೆ ಯತ್ನಿಸಿದ್ದಾರೆ. ಅಲ್ಲದೆ, ಮತೀಯ ಗಲಭೆ ಉಂಟು ಮಾಡಲು ಸಂಚು ರೂಪಿಸಿದ್ದಾರೆ. ಇದು ವಾಕ್ ಸ್ವಾತಂತ್ರ್ಯದ ದುರ್ಬಳಕೆಗೆ ಒಳ್ಳೆಯ ಉದಾಹರಣೆಯಾಗಿದೆ ಎಂದು ಹೇಳಿದ್ದರು.
ಸುಶಾಂತ್ ಆತ್ಮಹತ್ಯೆ ಪ್ರಕರಣದಲ್ಲಿ ಹೊಸ ಹೆಸರು ಎಂಟ್ರಿ: ಯಾರು ಈ ಶ್ರುತಿ ಮೋದಿ?