ಬಿಜನೋರ್: ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ 35 ವರ್ಷ ವಯಸ್ಸಿನ ಮಹಿಳೆಯೊಬ್ಬಳನ್ನು ಹಾಡುಹಗಲೇ ಗುಂಡಿಕ್ಕಿ ಕೊಂದಿರುವ ಪ್ರಕರಣ ವರದಿಯಾಗಿದೆ. ಹಿಂದಿನ ದಿನವಷ್ಟೇ ಪತಿ ಮತ್ತು ಅವನ ಕುಟುಂಬದವರ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ್ದ ಆಕೆಯ ಸಾವಿಗೆ ಅದೇ ಕಾರಣವಾಯಿತು ಎಂದು ಶಂಕಿಸಲಾಗಿದೆ.
ಉತ್ತರಪ್ರದೇಶದ ಬಿಜನೋರ್ನ ಸುರೇಂದ್ರ ನಗರ ಕಾಲೊನಿ ನಿವಾಸಿಯಾಗಿದ್ದ ಪ್ರಿಯಾ ಶರ್ಮಾ ಮೃತ ಮಹಿಳೆ. ಅ.29ರ ಶುಕ್ರವಾರ ಬೆಳಿಗ್ಗೆ 11:30 ರ ವೇಳೆಗೆ ಆಕೆ ಕೆಲಸ ಮುಗಿಸಿ ಕಾಲೇಜಿನಿಂದ ಮನೆಗೆ ಹಿಂತಿರುಗುತ್ತಿದ್ದಾಗ ಅವಳನ್ನು ಶೂಟ್ ಮಾಡಲಾಯಿತು. ಗುಂಡಿನ ಶಬ್ದ ಕೇಳಿ ಸ್ಥಳೀಯ ನಿವಾಸಿಗಳು ಹೊರಬಂದು ನೋಡಿದಾಗ ಅವಳು ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಬೈಕಿನ ಮೇಲೆ ಇಬ್ಬರು ಹಲ್ಲೆಕೋರರು ಸ್ಥಳದಿಂದ ಪರಾರಿಯಾದರು ಎನ್ನಲಾಗಿದೆ. ಮಾಹಿತಿ ಸಿಕ್ಕ ಪೊಲೀಸರು ಅವಳನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ದರೂ ಅವಳು ಆ ಮುನ್ನವೇ ಮೃತಪಟ್ಟಳು ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಪುನೀತ್ ಸಾವಿನ ನಂತರ ಎಚ್ಚೆತ್ತುಕೊಂಡ ಕೇರಳ ಸರ್ಕಾರ: ಜಿಮ್ಗಳಲ್ಲಿ ಹೊಸ ನಿಯಮ
“ಮೃತ ಪ್ರಿಯಾ ಶರ್ಮ ಪಿಎಚ್ಡಿ ಮಾಡಿದ್ದು, ಕೆಲವು ವರ್ಷಗಳ ಹಿಂದೆ ಎನ್ಇಟಿ ಪಾಸಾಗಿದ್ದರು. ಖಾಸಗಿ ಕಾಲೇಜಿನಲ್ಲಿ ಎಂಟು ವರ್ಷಗಳಿಂದ ಇಂಗ್ಲಿಷ್ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಳು. ಕೆಲ ವರ್ಷಗಳ ಹಿಂದೆ ಭಟವಾಲಿ ಗ್ರಾಮದ ಕಮಲ್ ದತ್ ಶರ್ಮ ಎಂಬುವನನ್ನು ಮದುವೆ ಆಗಿದ್ದಳು. ಅ.28 ರ ಗುರುವಾರ ತನ್ನ ಪತಿ ಮತ್ತು ಆತನ ಕುಟುಂಬದ ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ಸಲ್ಲಿಸಿದ್ದಳು ಎಂದು ಬಿಜನೋರ್ ಎಸ್ಪಿ ಧರಂವೀರ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮೃತಳ ಪಾಲಕರು, ಈ ಹಿಂದೆಯೂ ಅಳಿಯ ಕಮಲ್ ಶರ್ಮ ಅವಳ ಮೇಲೆ ಕಂಟ್ರಿ ಪಿಸ್ತೋಲಿನಿಂದ ಗುಂಡು ಹಾರಿಸಿದ್ದ ಎಂದೂ, ಅವನೇ ಅವಳನ್ನು ಸಾಯಿಸಿದ್ದಾನೆಂದೂ ಆರೋಪಿಸಿದ್ದಾರೆ. ಕಮಲ್ ಶರ್ಮ ಮತ್ತು ಕುಟುಂಬ ಸದಸ್ಯರ ವಿರುದ್ಧ ಕೊಲೆ ಆರೋಪ ದಾಖಲಿಸಿರುವ ಪೊಲೀಸರು, ಮೂರು ತನಿಖಾ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. (ಏಜೆನ್ಸೀಸ್)
ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಜಾತಿ ತನಿಖೆಗೆ ಸಿದ್ಧ ಎಂದ ಮಹಾ ಸರ್ಕಾರ
‘ನಾಟಿಕೋಳಿ ಸಾಂಬಾರ್, ಮಟನ್ ಫ್ರೈ ಅಂದ್ರೆ ಪಂಚಪ್ರಾಣ’; ಗಾಜನೂರಿನಲ್ಲಿ ಅಪ್ಪು ನೆನಪು