ಕುಕನೂರು: ಮಹಿಳೆಯರ ಮೇಲೆ ಹೆಚ್ಚು ದೌರ್ಜನ್ಯ ನಡೆಯುತ್ತಿದ್ದು, ಸರ್ಕಾರ ಗಮನಹರಿಸಿ ತಡೆಯಲು ಕಠಿಣ ಕ್ರಮ ಜಾರಿಗೊಳಿಸಬೇಕೆಂದು ನಿಸರ್ಗ ಸಂಜೀವಿನಿ ಗ್ರಾಪಂ ಮಟ್ಟದ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸುವರ್ಣಾ ದಾನವಡೆಯರ ಹೇಳಿದರು.
ಇದನ್ನೂ ಓದಿ: ಮಹಿಳೆಗೆ ವಂಚಿಸಿದವರ ಬಂಧನವಾಗಲಿ
ತಾಲೂಕಿನ ಭಾನಾಪುರದಲ್ಲಿ ತಾಪಂ, ತಾಲೂಕು ಅಭಿಯಾನ ನಿರ್ವಹಣಾ ಘಟಕ, ಗ್ರಾಪಂ, ನಿಸರ್ಗ ಸಂಜೀವಿನಿ ಗ್ರಾಪಂ ಮಟ್ಟದ ಮಹಿಳಾ ಒಕ್ಕೂಟದಿಂದ ಆಯೋಜಿಸಿದ್ದ ಲಿಂಗತ್ವಧಾರಿತ ದೌರ್ಜನ್ಯ ನಿವಾರಣೆ ಅಭಿಯಾನ ಸಭೆಯಲ್ಲಿ ಶನಿವಾರ ಮಾತನಾಡಿದರು.
ಮಹಿಳೆಯರಿಗೆ ಸಮಾನತೆ ನೀಡಿ ಸಮಾಜದಲ್ಲಿ ಧೈರ್ಯದಿಂದ ಜೀವಿಸಲು ಮುಕ್ತ ವಾತಾವರಣ ಸೃಷ್ಟಿಯಾಗಬೇಕು. ಈಗಾಗಲೇ ಮಹಿಳಾ ಒಕ್ಕೂಟ ಸೇರಿ ಅನೇಕ ಸಂಘಗಳು ಮಹಿಳೆಯರ ಸಬಲೀಕರಣಕ್ಕೆ ಸಾಕಷ್ಟು ಒತ್ತು ನೀಡಿದ್ದು, ಸ್ವಯಂ ಉದ್ಯೋಗ ಮಾಡುವ ಮಹಿಳೆಯರಿಗೆ ಉತ್ತೇಜನ ನೀಡಬೇಕು ಎಂದರು.
ವಲಯ ಮೇಲ್ವಾಚರಕಿ ಪೂಜಾ ನಾಯಕ ಮಾತನಾಡಿ, ಲಿಂಗತ್ವಧಾರಿತ ದೌರ್ಜನ್ಯ ನಿವಾರಣೆಗಾಗಿ ಅಭಿಯಾನ ಪ್ರಾರಂಭವಾಗಿದೆ. ಇದಕ್ಕೆ ಪುಷ್ಟಿಯಾಗಿ ನರೇಗಾ ಯೋಜನೆಯಡಿ ಮಹಿಳೆಯರು, ಪುರುಷರಿಗೆ ಸಮಾನ ವೇತನ ನೀಡುತ್ತಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಒಕ್ಕೂಟದ ಕಾರ್ಯದರ್ಶಿ ಹುಸೇನ್ಬಿ ನಡವಲಮನಿ, ಖಜಾಂಚಿ ದೇವಕ್ಕ ವಾಲ್ಮೀಕಿ, ಪದಾಧಿಕಾರಿಗಳಾದ ಅಕ್ಕಮ್ಮ ಮಠದ, ವಿಶಾಲಾಕ್ಷಿ ಸಸಿಮಠ, ಸೈನಜಾಬೇಗಂ, ದಾಕ್ಷಾಯಿಣಿ ತಳಬಾಳ, ಲಕ್ಷ್ಮೀ ಕುರಿ, ಮಂಜುಳಾ ಮ್ಯಾಗಳಮನಿ ಇದ್ದರು.