ನವದೆಹಲಿ: ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿಗಳಲ್ಲಿ ಒಂದಾದ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗುವುದಕ್ಕೆ ದಿನಗಣನೆ ಶುರುವಾಗಿದ್ದು, ಮಾರ್ಚ್ 22 ರಂದು ಆರಂಭವಾಗಲಿರುವ ಟೂರ್ನಿಯ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ.
ಐಪಿಎಲ್ ವೇಳಾಪಟ್ಟಿ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಈ ಒಂದು ತಂಡ ಕಪ್ ಗೆಲ್ಲುವುದನ್ನು ನೋಡಲು ಕಾಯುತ್ತಿದ್ದೇನೆ. ಈ ಕಾಯುವಿಕೆಯ ಸಮಯ ಮೀರಿದೆ ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ಆರ್ಸಿಬಿ ಅರ್ಹ
ಖಾಸಗಿ ಸುದ್ದಿ ವಾಹಿನಿ ಒಂದರ ಸಂದರ್ಶನದಲ್ಲಿ ಮಾತನಾಡಿದ ಸುರೇಶ್ ರೈನಾ, ಕಳೆದ 16 ಆವೃತ್ತಿಗಳಲ್ಲಿ ವಿರಾಟ್ ಕೊಹ್ಲಿ ಆರ್ಸಿಬಿ ಪರ ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ಅವರು ಕಪ್ ಗೆಲ್ಲಲು ಅರ್ಹರು. ಕಳೆದ ಆವೃತ್ತಿಯಲ್ಲಿ ಸಿಎಸ್ಕೆ ಗೆದ್ದಿದೆ. ಈ ವರ್ಷ ಕಪ್ ಗೆಲ್ಲದ ತಂಡ ಚಾಂಪಿಯನ್ ಆಗಬೇಕೆಂದು ನಾನು ಬಯಸುತ್ತೇನೆ.
ಇದನ್ನೂ ಓದಿ: ಅಸಮಾಧಾನ ಇರುವುದು ನಿಜ; ಮತದಾನಕ್ಕೆ ಗೈರು ಹಾಜರಾಗಿದ್ದಕ್ಕೆ ಕಾರಣ ಬಿಚ್ಚಿಟ್ಟ ಶಿವರಾಮ್ ಹೆಬ್ಬಾರ್
ಅದರಂತೆ ವಿರಾಟ್ ಕೊಹ್ಲಿ ಮತ್ತು ಆರ್ಸಿಬಿ ಟ್ರೋಫಿಯನ್ನು ಗೆಲ್ಲಬೇಕೆಂದು ನಾನು ಬಯಸುತ್ತೇನೆ. ಈ ಕಾಯುವಿಕೆಯ ಸಮಯ ಮೀರಿದೆ. ಈ ಸಲವಾದರೂ ಆರ್ಸಿಬಿ ಚಾಂಪಿಯನ್ ಪಟ್ಟಕ್ಕೇರಲಿ ಎಂದು ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಆಶಿಸಿದ್ದಾರೆ.
ಇದೀಗ ಆರ್ಸಿಬಿ 17ನೇ ಸೀಸನ್ ಆರಂಭಕ್ಕೆ ಸಜ್ಜಾಗಿ ನಿಂತಿದೆ. ಈ ಬಾರಿಯಾದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆಲ್ಲುವ ಮೂಲಕ 16 ವರ್ಷಗಳ ಸುದೀರ್ಘ ಕಾಯುವಿಕೆಯನ್ನು ಅಂತ್ಯಗೊಳಿಸುತ್ತದೆಯೇ ಎಂದು ಕಾದು ನೋಡಬೇಕಿದೆ.