ಬೆಂಗಳೂರು: ಇಂದು ಮಧ್ಯಾಹ್ನ 1.30ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಪತ್ರಿಕಾಗೋಷ್ಠಿ ಕರೆದಿದ್ದಾರೆ. ಈ ನಡುವೆ ಚಲನಚಿತ್ರ ನಟ ಸುದೀಪ್ ಬಿಜೆಪಿ ಸೇರುವ ಬಗ್ಗೆ ಅನೇಕ ಊಹಾಪೋಹಗಳು ಹರಿದಾಡುತ್ತಿದ್ದು ಈ ಬಗ್ಗೆ ಸ್ಪಷ್ಟನೆ ಇಂದಿನ ಸುದ್ದಿಗೋಷ್ಟಿಯಲ್ಲಿ ಸಿಗಲಿದೆ ಎನ್ನಲಾಗುತ್ತಿದೆ.
ನಟ ಸುದೀಪ್ ಬಿಜೆಪಿ ಸೇರುವ ಬಗ್ಗೆ ಬಿಜೆಪಿ ಖಚಿತಪಡಿಸಿಲ್ಲ. ಆದರೆ ಸುದೀಪ್ ಆಪ್ತ ಜಾಕ್ ಮಂಜು ಬಿಜೆಪಿ ಸೇರುತ್ತಾರೆ ಎನ್ನಲಾಗಿದ್ದು ಚಿಕ್ಕಪೇಟೆಯಿಂದ ಬಿಜೆಪಿ ಟಿಕೆಟ್ ಸಿಗುತ್ತದೆ ಎಂದೇ ಹೇಳಲಾಗುತ್ತಿದೆ.
ಇಂದು ಮಧ್ಯಾಹ್ನ ಖಾಸಗಿ ಹೋಟೆಲ್ನಲ್ಲಿ ಮಧ್ಯಾಹ್ನ 1.30ಕ್ಕೆ ಸುದ್ದಿಗೋಷ್ಟಿ ನಡೆಯಲಿದೆ. ಈ ಸುದ್ದಿಗೋಷ್ಟಿಯನ್ನು ಸುದೀಪ್ಗಾಗಿಯೇ ಸಿಎಂ ಕರೆದಿದ್ದಾರೆ ಎನ್ನಲಾಗಿದೆ.
ಚುನಾವಣಾ ಪ್ರಚಾರ ಸಮಿತಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಧ್ಯಕ್ಷರಾಗಿದ್ದು ಸಿನಿಮಾ ಸ್ಟಾರ್ ನಟರಿಗೆ ಗಾಳ ಹಾಕಿದ್ದಾರೆ. ಹಿಂದಿನಿಂದಲೂ ಬೊಮ್ಮಾಯಿ ಜತೆ ಉತ್ತಮ ಒಡನಾಟ ಹೊಂದಿರುವ ಕಿಚ್ಚ ಸುದೀಪ್ರನ್ನು ಆತ್ಮೀಯನನ್ನು ಪಕ್ಷಕ್ಕೆ ಬರಮಾಡಿಕೊಂಡು, ಸ್ಟಾರ್ ಕ್ಯಾಂಪೇನರ್ ಆಗಿ ಚುನಾವಣಾ ಪ್ರಚಾರಕ್ಕೆ ಬಿಜೆಪಿ ಪ್ಲಾನ್ ರೂಪಿಸಿದೆ ಎನ್ನಲಾಗಿದೆ.
ನರೇಂದ್ರ ಮೋದಿ ನಾಯಕತ್ವಕ್ಕೆ ಬೆಂಬಲ ಪಡೆಯುವುದರ ಜೊತೆಗೆ, ನಟ ಸುದೀಪ್ರನ್ನು ಪಕ್ಷದಲ್ಲಿ ದೊಡ್ಡ ಸ್ಟಾರ್ ಕ್ಯಾಂಪೇನರ್ ಆಗಿ ಮಾಡಿಕೊಳ್ಳುವ ಪ್ಲಾನ್ ಮಾಡಿಕೊಳ್ಳಲಾಗಿದ್ದು ಈ ಮೂಲಕ ಮತ ಸೆಳೆಯುವ ತಂತ್ರವನ್ನು ಬಿಜೆಪಿ ಅನುಸರಿಸಲಿದೆ ಎನ್ನಲಾಗಿದೆ.
ಇಡೀ ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ತಯಾರಿ ನಡೆಸಲಾಗುತ್ತಿದ್ದು ಪ್ರಧಾನಿ ನರೇಂದ್ರ ಮೋದಿಯವರ ವೇದಿಕೆಯಲ್ಲೇ ಸುದೀಪ್ ಪ್ರಚಾರಕ್ಕೆ ಅವಕಾಶ ಮಾಡಿಕೊಡುವ ಬಗ್ಗೆಯೂ ಆಲೋಚನೆ ಇದೆ ಎನ್ನಲಾಗಿದೆ.
ವಾಲ್ಮೀಕಿ ಕ್ಷೇತ್ರಗಳ ಕ್ಷೇತ್ರದಲ್ಲಿ ಪ್ರಚಾರ ಮಾಡಿಸಲು ಪ್ಲಾನ್ ಮಾಡಲಾಗಿದ್ದು ತಮ್ಮ ಕ್ಷೇತ್ರ ಶಿಗ್ಗಾಂ ವಿಧಾನಸಭಾ ಕ್ಷೇತ್ರದಲ್ಲೂ ಪ್ರಚಾರ ಮಾಡಿಸಲು ಸಿಎಂ ಪ್ಲಾನ್ ರೂಪಿಸಿದ್ದಾರೆ. ಈ ಎಲ್ಲ ಕಾರಣದಿಂದಾಗಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾದ ಬಳಿಕ ಪ್ರಾರಂಭದಲ್ಲೇ ನಟ ಸುದೀಪ್ಗೆ ಸಿಎಂ ಗಾಳ ಹಾಕಿದ್ದಾರೆ ಎನ್ನಲಾಗಿದೆ.